Skip to main content

ನವಗ್ರಹ ಪರಿಚಯ

ನವಗ್ರಹ ಪರಿಚಯ ವೈದಿಕ ಜ್ಯೋತಿಷ್ಯದ ಅಧ್ಯಯನವೆಂದರೆ ನವಗ್ರಹಗಳ ಅಧ್ಯಯನವೇ ಆಗಿದೆ. ಸೂರ್ಯಾದಿ ನವಗ್ರಹಗಳು, ಮೇಷಾದಿ ರಾಶಿಗಳು ಮತ್ತು ಲಗ್ನಾದಿ ದ್ವಾದಶ ಭಾವಗಳು, ಇವು ಜ್ಯೋತಿಷ್ಯದ ಅಧ್ಯಯನದ ಮೊದಲ ಪಾಠ. ನವಗ್ರಗಗಳಿಂದಲೆ ನಮ್ಮ ಜೀವನದ ಕಾರ್ಯಕಲಾಪ. ಗ್ರಹಗಳೇ ಪ್ರೇರಕ ಮತ್ತು ಕಾರಕಗಳಾಗಿ ನಮ್ಮ ಬದುಕಿನ ಸಮಗ್ರ ಚಟುವಟಿಕೆಗಳಿಗೆ ಕಾರಣಗಳಾಗಿವೆ. ಗ್ರಹಾಧೀನಂ ಜಗತ್ಸರ್ವಂ ಗ್ರಹಾಧೀನಾ ನರಾವರಾಃ | ಸೃಷ್ಟಿಸಂರಕ್ಷಣಸಂಹಾರಾಃ ಸರ್ವೇ ಚಾಪಿ ಗ್ರಹಾನುಗಾಃ || ಸಮಸ್ತ ಜಗತ್ತು ಗ್ರಹಗಳ ಅಧೀನತೆಯಲ್ಲಿದೆ, ಮನುಷ್ಯ ಮತ್ತು ಸರ್ವ ಜೀವರಾಶಿ ಗ್ರಹಾಧೀನವಾಗಿಯೇ ಇರುತ್ತವೆ. ಜಗತ್ತಿನ ಸೃಷ್ಟಿ, ಸಂರಕ್ಷಣೆ ಮತ್ತು ಸಂಹಾರ ಎಲ್ಲವೂ ಗ್ರಹಗಳಿಗೆ ಅನುಗಾಮಿ-ಅನುಯಾಯಿಯಾಗಿ ನಡೆಯುತ್ತದೆ. ಭಾರತೀಯ ಜ್ಯೋತಿಷ್ಯದಲ್ಲಿ ಅನೇಕ ಅವಕಾಶೀಯ ಕಾಯಗಳ ಉಲ್ಲೇಖ ಬರುತ್ತದೆ. ಗ್ರಹ, ನಕ್ಷತ್ರ, ತಾರೆ, ಉಪಗ್ರಹ, ಕ್ಷುದ್ರಗ್ರಹ, ಕೇತು, ಉಲ್ಕೆಗಳು ಇತ್ಯಾದಿ. ಇಷ್ಟೇ ಅಲ್ಲದೆ ಇನ್ನೂ ಅನೇಕ ದೇವತಾ, ಯಕ್ಷ ಸಮೂಹವೂ ಗ್ರಹಗಳೆಂತಲೆ ಕರೆಯಿಸಿಕೊಳ್ಳುತ್ತವೆ. ಆದರೆ ಎಲ್ಲದರಲ್ಲಿಯೂ ನವಗ್ರಹಗಳಿಗೆ ಪ್ರಾಧಾನ್ಯತೆಯಿದೆ. ಸೂರ್ಯಃ ಸೋಮೋ ಮಹೀಪುತ್ರಃ ಸೋಮಪುತ್ರೋ ಬೃಹಸ್ಪತಿಃ | ಶುಕ್ರಃ ಶನೈಶ್ಚರೋ ರಾಹುಃ ಕೇತುಶ್ಚೇತಿ ಗ್ರಹಾಃ ಸ್ಮೃತಾಃ || (ಯಾಜ್ಞ್ಯವಲ್ಕ್ಯ ಸ್ಮೃತಿ) ಸೂರ್ಯ, ಚಂದ್ರ, ಭೂಮಿಪುತ್ರನಾದ ಕುಜ, ಚಂದ್ರಪುತ್ರನಾದ ಬುಧ, ದೇವಗುರು ಬೃಹಸ್ಪತಿ, ಅಸುರಗುರು ಶುಕ್ರ, ಶನೈಶ್ಚರ ಮತ್ತು ಛಾಯಾಗ್ರಹಗಳಾದ ರಾಹು, ಕೇತು, ಇವುಗಳನ್ನು ಗ್ರಹಗಳೆಂದು ಕರೆಯಲಾಗುತ್ತದೆ. “ಗ್ರಹ” ಶಬ್ದದ ಅರ್ಥದ ಬಗೆಗೆ ಸ್ವಲ್ಪ ವಿಚಾರಣೆ ಅಗತ್ಯವಿದೆ. ಗ್ರಹ ಎಂಬುದನ್ನು ಇಂಗ್ಲೀಷಿನಲ್ಲಿ Planet ಎಂದು ಕರೆಯಲಾಗುತ್ತದೆ. ಪ್ಲ್ಯಾನೆಟ್ ಪದವು ಗ್ರೀಕ ಮೂಲದ್ದಾಗಿದ್ದು ತಿರುಗಾಡುವ ಆಕಾಶಕಾಯ ಎಂಬ ಸಾಮಾನ್ಯಾರ್ಥದಲ್ಲಿ ಬಳಸಲ್ಪಡುತ್ತದೆ. ಆದರೆ ಜ್ಯೋತಿಷ್ಯದ ಪರಿಭಾಷೆಯಲ್ಲಿ ಈ ಬಳಕೆ ಸೂಕ್ತವಲ್ಲ. ಸಂಸ್ಕೃತದಲ್ಲಿ ಗ್ರಹವನ್ನು “ಗ್ರಹ್ಣಾತೀತಿ ಗ್ರಹ”, “ಗ್ರಹ ಗ್ರಹಣೇ” ಎಂದು ಅರ್ಥೈಸಲಾಗುತ್ತದೆ. ಆದ್ದರಿಂದ ಗ್ರಹ ಶಬ್ದವನ್ನು – ಯಾವುದು ಹಿಡಿದುಕೊಳ್ಳುತ್ತದೆಯೋ, ಯಾವುದು ಆವರಿಸಿಕೊಳ್ಳುತ್ತದೆಯೋ ಅದು, ಈ ರೀತಿಯಲ್ಲಿ ತಿಳಿದುಕೊಳ್ಳಬಹುದು. ಇದು ಶಾಸ್ತ್ರೀಯವಾಗಿ ಸಮ್ಮತವಾದ ವಿವೇಚನೆ. ಗ್ರಹಗಳು ಮನುಷ್ಯನನ್ನು ತಮ್ಮ ಪ್ರಭಾವದಿಂದ ಹಿಡಿದುಹಾಕುತ್ತವೆ, ಆವರಿಸಿಬಿಡುತ್ತವೆ. ಗ್ರಹಗಳ ಪ್ರಭಾವದಲ್ಲಿ ಸಿಲುಕಿರುವ ವ್ಯಕ್ತಿಯು ಸ್ವಸ್ವಾತಂತ್ರ್ಯ, ಬುದ್ಧಿ, ವಿಚಾರಶಕ್ತಿಯನ್ನು ಕಳೆದುಕೊಳ್ಳುತ್ತಾನೆ, ಅವು ಆಡಿಸಿದಂತೆ ನಡೆಸಿದಂತೆ ವರ್ತಿಸುತ್ತಾನೆ. ಇದು ಸಮಾನ ಬಳಕೆಯ ಇಂಗ್ಲೀಷ ಪದಕ್ಕು ಶಾಸ್ತ್ರೀಯ ಅರ್ಥವಿವರಣೆಗೂ ಇರುವ ವ್ಯತ್ಯಾಸ. ಗ್ರಹಗಳನ್ನು ಕೇವಲ ಆಕಾಶೀಯ ಕಾಯಗಳು ಎಂದು ಪಾಶ್ಚಾತ್ಯ ರೀತ್ಯಾ ಅರ್ಥೈಸಿದರೆ ಅವುಗಳ ಪ್ರಭಾವದ ವಿವರಣೆಯು ಸಮಂಜಸವಾಗುವುದಿಲ್ಲ. ಗ್ರಹಗಳು ಮನುಷ್ಯನ ಕರ್ಮಗಳಿಗನುವಾಗಿ ತಮ್ಮ ಪ್ರಭಾವವನ್ನು ಬೀರುತ್ತಾ ನಮ್ಮ ಆಯುರ್ಮಾನವಿಡೀ ಪ್ರೇರಕಶಕ್ತಿಗಳಾಗಿರುತ್ತವೆ. ಪಾಪಕರ್ಮಗಳ ಫಲವಾಗಿ ಗ್ರಹಗಳ ಕಾಟ, ಪುಣ್ಯಕರ್ಮಗಳ ಫಲವಾಗಿ ಗ್ರಹಗಳ ಅನುಗ್ರಹ. ಆದ್ದರಿಂದ ಗ್ರಹಕಾಟ, ದೋಷಗಳಿದ್ದಾಗ ಸರಿಯಾಗಿ ಗ್ರಹಸಂಭಂದಿತ ಆರಾಧನೆ, ಶಾಂತಿಕರ್ಮಗಳಿಂದ ಪಾಪನಾಶ ಮತ್ತು ಪುಣ್ಯಪ್ರಾಪ್ತಿ. ಯಶ್ಚ ಯಸ್ಯ ಯದಾ ದುಃಸ್ಥಃ ಸ ತಂ ಯತ್ನೇನ ಪೂಜಯೇತ್ | ಬ್ರಹ್ಮಣೈಷಾಂ ವರೋ ದತ್ತಃ ಪೂಜಿತಾಃ ಪೂಜಯಿಷ್ಯಥ || (ಯಾಜ್ಞ್ಯವಲ್ಕ್ಯ ಸ್ಮೃತಿ) ದುಸ್ಥಾನಗಳಲ್ಲಿ ಗ್ರಹಗಳು ಇದ್ದಾಗ ಆಯಾ ಗ್ರಹಗಳ ಪೂಜೆಯನ್ನು ಯತ್ನದಿಂದ (ವಿಶೇಷವಾದ ಪ್ರಯತ್ನದಿಂದ) ಮಾಡಬೇಕು. “ಪೂಜಿಸುವವರ ಎಲ್ಲ ಅನಿಷ್ಟಗಳನ್ನು ನಿವಾರಿಸಿ ಅಭೀಷ್ಟವನ್ನು ಪ್ರದಾನ ಮಾಡುವವರಾಗಿ” ಎಂದು ಹಿಂದೆ ಬ್ರಹ್ಮದೇವನು ಗ್ರಹಗಳಿಗೆ ವರವನ್ನು ಕೊಟ್ಟಿರುತ್ತಾನೆ. ಆಯುಶ್ಚ ವಿದ್ಯಾಂ ಚ ತಥಾ ಸುಖಂ ಚ | ಧರ್ಮಾರ್ಥಕಾಮಾನ್ ಬಹುಪುತ್ರತಾಂ ಚ | ಶತ್ರುಕ್ಷಯಂ ರಾಜಸು ಪೂಜ್ಯತಾಂ ಚ| ತುಷ್ಟಾ ಗ್ರಹಾಃ ಸರ್ವಮೇತತ್ ದಿಶಂತಿ || (ಶಾಂತಿಚಿಂತಾಮಣಿ) ಪ್ರಸನ್ನರಾದ ನವಗ್ರಹಗಳು ಆಯುಷ್ಯ, ವಿದ್ಯೆ, ಸುಖ, ಧರ್ಮ, ಸಂಪತ್ತು, ಸಂತತಿ, ಶತ್ರುನಾಶ, ರಾಜಸಮ ಮರ್ಯಾದೆ ಇತ್ಯಾದಿ ಎಲ್ಲವನ್ನು ಕೊಡುತ್ತಾರೆ. ನವಗ್ರಹ ಪರಿಚಯ – ವಿವಿಧ ವಿಚಾರಗಳು (ಆಧಿಪತ್ಯ, ಉಚ್ಚ, ನೀಚ, ಮೂಲತ್ರಿಕೋಣ) ಹಿಂದಿನ ನವಗ್ರಹ ಪರಿಚಯ ಲೇಖನದಲ್ಲಿ ಗ್ರಹವೆಂದರೆ ಏನು, ಅದರ ಪ್ರಭಾವ ಹೇಗೆ ಇತ್ಯಾದಿ ವಿಷಯಗಳನ್ನು ನೋಡಿದ್ದಾಯಿತು. ಪ್ರಸಕ್ತ ಈ ಒಂಬತ್ತು ಗ್ರಹಗಳಿಂದ ಬೋಧ್ಯ ವಿವಿದ ವಿಷಯಗಳನ್ನು ಮುಂದಿನ ಲೇಖನಗಳಲ್ಲಿ ತಿಳಿದುಕೊಳ್ಳೋಣ. ಈಗ ಗ್ರಹಗಳ ಆಧಿಪತ್ಯ, ಉಚ್ಚ, ನೀಚ ಮತ್ತು ಮೂಲತ್ರಿಕೋಣ ಭಾಗಗಳನ್ನು ಕುರಿತು ವಿಚಾರ. ರಾಶ್ಯಾಧಿಪರು – ಆಧಿಪತ್ಯವು ಯಾವುದೇ ಗ್ರಹವು ತನ್ನ ಅತ್ಯಂತ ಹೆಚ್ಚಿನ ಅಥವಾ ಪೂರ್ಣ ಪ್ರಭಾವವನ್ನು ತೋರಿಸುವ ರಾಶಿ. ಈ ರಾಶಿಯನ್ನೇ ಆ ಗ್ರಹದ ಸ್ವರಾಶಿ, ಸ್ವಕ್ಷೇತ್ರ, ಸ್ವಂತ ಮನೆಯೆಂದು ಕರೆಯಲಾಗುತ್ತದೆ. ಯಜಮಾನನು ತನ್ನ ಮನೆಯಲ್ಲಿ ಪ್ರಬಲನಾಗಿರುವನಲ್ಲವೆ. ಸೂರ್ಯಾದಿ ನವಗ್ರಹಗಳು ದ್ವಾದಶ ರಾಶಿಗಳಲ್ಲಿ ಹೊಂದಿರುವ ಆಧಿಪತ್ಯ ಕ್ರಮ ಹೀಗೆ ಇದೆ - ಸೂರ್ಯ ಮತ್ತು ಚಂದ್ರರು ಒಂದೊಂದು ರಾಶಿಗೆ ಅಧಿಪತಿಗಳಾಗಿದ್ದಾರೆ. ದ್ವಾದಶ ರಾಶಿಗಳನ್ನು ಮನುಷ್ಯನ ದೇಹದ ಹನ್ನೆರಡು ಭಾಗಗಳಲ್ಲಿ ವಿಭಾಗಿಸಲಾಗಿದೆ. ಈ ಆಕಾರವನ್ನು ಕಾಲಪುರುಷನ ಶರೀರವೆನ್ನಲಾಗಿದೆ. ಮನುಷ್ಯದ ದೇಹದ ಅತ್ಯಂತ ಮುಖ್ಯ ಅಂಗಗಳು ಮನಸ್ಸು ಮತ್ತು ಆತ್ಮ. ಇವುಗಳ ಕಾರಕರು ಕ್ರಮವಾಗಿ ಚಂದ್ರ ಮತ್ತು ಸೂರ್ಯ. ಕಾಲಪುರುಷನ ಶರೀರರಲ್ಲಿ ಹೃದಯಸ್ಥಾನದಲ್ಲಿ ಬರುವ ಕರ್ಕರಾಶಿಯೇ ಚಂದ್ರನ ಆಧಿಪತ್ಯ. ಕರ್ಕರಾಶಿಯ ನಂತರ ಬರುವ ಸಿಂಹರಾಶಿಯ ಕಾಲಪುರುಷನ ಆತ್ಮದ್ಯೋತಕವಾಗಿ ಸೂರ್ಯನ ಆಧಿಪತ್ಯವನ್ನು ಹೊಂದಿದೆ. ಉಳಿದ ಗ್ರಹಗಳಾದ ಕುಜ, ಬುಧ, ಗುರು, ಶುಕ್ರ ಮತ್ತು ಶನಿ – ಇವರು ಪ್ರತಿಯೊಬ್ಬರು ಎರಡೆರಡು ರಾಶಿಗಳ ಅಧಿಪತಿಗಳಾಗಿದ್ದಾರೆ. ಕರ್ಕದ ಹಿಂದಿರುವ ಮಿಥುನ ಮತ್ತು ಸಿಂಹದ ನಂತರದ ಕನ್ಯಾರಾಶಿಗಳಿಗೆ ಬುಧ ಅಧಿಪತಿ. ಇದೇ ರೀತಿ ವೃಷಭ ಮತ್ತು ತುಲಾ ರಾಶಿಗಳಿಗೆ ಶುಕ್ರ ಅಧಿಪತಿ, ಮೇಷ ಮತ್ತು ವೃಶ್ಚಿಕ ರಾಶಿಗಳಿಗೆ ಕುಜ (ಮಂಗಳ) ಅಧಿಪತಿ, ಧನು ಮತ್ತು ಮೀನ ರಾಶಿಗಳಿಗೆ ಗುರು ಅಧಿಪತಿ, ಮಕರ ಮತ್ತು ಕುಂಭ ರಾಶಿಗಳಿಗೆ ಶನೈಶ್ಚರನು ಅಧಿಪತಿಯಾಗಿರುತ್ತಾನೆ. ರಾಹು, ಕೇತುಗಳಿಗೆ ಯಾವುದೇ ರಾಶ್ಯಾಧಿಪತ್ಯವನ್ನು ಶಾಸ್ತ್ರಗ್ರಂಥಗಳಲ್ಲಿ ಹೇಳಿಲ್ಲವಾದರು ಸಂಪ್ರದಾಯದಂತೆ ಕನ್ಯಾ, ಮೀನಗಳನ್ನು ಕ್ರಮದಿಂದ ಅವರ ಸ್ವಗ್ರಹವೆಂದು ಕರೆಯಲಾಗಿದೆ. ಕೆಲವು ನಾಡೀಗ್ರಂಥಗಳಲ್ಲಿ ಕುಂಭ ಮತ್ತು ಮೇಷಗಳನ್ನು ಕ್ರಮವಾಗಿ ರಾಹು, ಕೇತುಗಳ ಆಧಿಪತ್ಯ ರಾಶಿಗಳೆಂದು ಕರೆಯಲಾಗಿದೆ. ಗ್ರಹಗಳು ನಿರ್ದಿಷ್ಟರಾಶಿ, ಭಾಗಗಳಲ್ಲಿ ಇದ್ದಾಗ ಅವುಗಳನ್ನು ಉಚ್ಚ, ನೀಚ ಮತ್ತು ಮೂಲತ್ರಿಕೋಣದಲ್ಲಿ ಸ್ಥಿತ ಎಂದು ಹೇಳಲಾಗುತ್ತದೆ. ಉಚ್ಚರಾಶಿಯಿಂದ ಏಳನೇಯ ರಾಶಿಯು ಆ ಗ್ರಹದ ನೀಚರಾಶಿಯಾಗಿರುತ್ತದೆ. ಗ್ರಹಗಳ ಉಚ್ಚರಾಶಿಯ ಕೆಲವು ಅಂಶಗಳಷ್ಟು ಭಾಗವನ್ನು ಪರಮೋಚ್ಚ ಭಾಗವೆನ್ನಲಾಗುತ್ತದೆ. ಇದೇ ರೀತಿ ನೀಚರಾಶಿ ಮತ್ತು ಪರಮನೀಚ ಭಾಗವೂ ಸಹ ಇರುತ್ತದೆ. ಉಚ್ಚರಾಶಿಯಲ್ಲಿರುವ ಗ್ರಹವೂ ಶುಭಪ್ರದವೂ ನೀಚದಲ್ಲಿರುವ ಗ್ರಹವು ಅಶುಭಫಲವನ್ನು ಕೊಡುತ್ತದೆ, ಇದು ಸಾಮಾನ್ಯ ನಿಯಮವಾದರು ಈ ನಿಯಮಕ್ಕೆ ಕೆಲವು ವಿಕಲ್ಪಗಳು ಇವೆ. ಸೂರ್ಯ ಮೇಷದಲ್ಲಿ ಉಚ್ಚ, ತುಲಾದಲ್ಲಿ ನೀಚನಾಗಿರುತ್ತಾನೆ. ಸೂರ್ಯನ ಪರಮೋಚ್ಚ ಮತ್ತು ಪರಮನೀಚ ಭಾಗಗಳು ಆರಂಭದ -10 ಅಂಶಗಳು (ಡಿಗ್ರಿಗಳು). ಚಂದ್ರ ಉಚ್ಚ – ವೃಷಭ, ನೀಚ – ವೃಶ್ಚಿಕ, ಪರಮ ಉಚ್ಚ/ನೀಚ ಭಾಗಗಳು – 3 ಡಿಗ್ರಿ. ಮಂಗಳ (ಕುಜ) ಉಚ್ಚ – ಮಕರ, ನೀಚ – ಕರ್ಕ, ಪರಮ ಉಚ್ಚ/ನೀಚ ಭಾಗಗಳು – 28 ಡಿಗ್ರಿ. ಬುಧ ಉಚ್ಚ – ಕನ್ಯಾ, ನೀಚ – ಮೀನ, ಪರಮ ಉಚ್ಚ/ನೀಚ ಭಾಗಗಳು – 15 ಡಿಗ್ರಿ. ಗುರು ಉಚ್ಚ – ಕರ್ಕ, ನೀಚ – ಮಕರ, ಪರಮ ಉಚ್ಚ/ನೀಚ ಭಾಗಗಳು – 5 ಡಿಗ್ರಿ. ಶುಕ್ರ ಉಚ್ಚ – ಮೀನ, ನೀಚ – ಕನ್ಯಾ, ಪರಮ ಉಚ್ಚ/ನೀಚ ಭಾಗಗಳು – 27 ಡಿಗ್ರಿ. ಶನಿ ಉಚ್ಚ – ತುಲಾ, ನೀಚ – ಮೇಷ, ಪರಮ ಉಚ್ಚ/ನೀಚ ಭಾಗಗಳು – 20 ಡಿಗ್ರಿ. ರಾಹು ಉಚ್ಚ – ಮಿಥುನ, ನೀಚ – ಧನು, ಪರಮ ಉಚ್ಚ/ನೀಚ ಭಾಗಗಳು – 15 ಡಿಗ್ರಿ. ಕೇತು ಉಚ್ಚ – ಧನು, ನೀಚ – ಮಿಥುನ, ಪರಮ ಉಚ್ಚ/ನೀಚ ಭಾಗಗಳು – 15 ಡಿಗ್ರಿ. ಮೂಲತ್ರಿಕೋಣವನ್ನು ಅನೇಕಾಂಶ ಜ್ಯೋತಿಷ್ಯರು ಇಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮುಖ್ಯವಾಗಿ ಮೂಲತ್ರಿಕೋಣವೆಂದರೆ ಏನು? ಎಂದು ಬಹುಜನಕ್ಕೆ ಗೊತ್ತಿಲ್ಲ. ಗ್ರಹಗಳಿಗೆ ಉಚ್ಚ, ನೀಚ, ಆಧಿಪತ್ಯಗಳು ಇರುವಾಗ ಈ ಮೂಲತ್ರಿಕೋಣದ ಅಗತ್ಯವಾದರೂ ಏನು? ಉತ್ತರವನ್ನು ವಿವರಿಸುವುದು ಸ್ವಲ್ಪ ಕಷ್ಟ. ಜಾತಕದ ಅಧ್ಯಯನ ಮಾಡುವಾಗ ಅದರಲ್ಲೂ ವರ್ಗ ಕುಂಡಲಿಗಳ ವಿಶ್ಲೇಷಣೆಯಲ್ಲಿ ಈ ಮೂಲತ್ರಿಕೋಣಕ್ಕೆ ಹಿರಿದಾದ ಮಹತ್ವವಿದೆ. ಮೂಲತ್ರಿಕೋಣದಿಂದ ಫಲಾದೇಶ ಜ್ಯೋತಿಷ್ಯದ ಕ್ಲಿಷ್ಟ ಪದ್ದತಿಗಳಲ್ಲಿ ಒಂದು (ಈ ಕಾರಣದಿಂದಲೇ ಬಹಳಷ್ಟು ನಗಣಿತಪಟುಗಳು ಇದನ್ನು ಕೈಬಿಟ್ಟಂತಿದೆ). ಯಾವುದೇ ಗ್ರಹದ ಮೂಲತ್ರಿಕೋಣ ಅಥವಾ ತ್ರಿಕೋಣ ಬಲರಾಶಿಯು ಒಂದು ವಿಶೇಷ ರಾಶಿಯ ವಿಶಿಷ್ಟ ಅಂಶಗಳಷ್ಟು ಇರುತ್ತದೆ. ಈ ರಾಶಿ-ಅಂಶದಲ್ಲಿ ಆ ಗ್ರಹವು ಇದ್ದಾದ ಮಹಾ ಬಲಿಷ್ಟವಾಗಿ, ಶ್ರೇಷ್ಠಫಲಗಳನ್ನು ನೀಡುತ್ತದೆ. ಈ ಗ್ರಹದ ಸಾಮರ್ಥ್ಯ ಉಳಿದೆಲ್ಲ ಗ್ರಹಗಳನ್ನು ಮೀರಿಸುವಂಥದ್ದಾಗಿರುತ್ತದೆ. ಮೇಲ್ನೊಟದ ಜಾತಕವಾಚನದಲ್ಲಿ ಇದು ತಿಳಿದುಬರುವುದಿಲ್ಲ. ಸೂರ್ಯಾದಿ ನವಗ್ರಹಗಳ ಮೂಲತ್ರಿಕೋಣವು ಕೆಳಕಂಡಂತೆ ಇರುತ್ತದೆ. ಸೂರ್ಯ – ಸಿಂಹ ರಾಶಿಯ 0 ರಿಂದ 20 ಡಿಗ್ರಿ ಮೂಲತ್ರಿಕೋಣ. ಚಂದ್ರ – ವೃಷಭ 4 ರಿಂದ 30 ಡಿಗ್ರಿ. ಕುಜ – ಮೇಷ 0 ರಿಂದ 12 ಡಿಗ್ರಿ. ಬುಧ – ಕನ್ಯಾ 16 ರಿಂದ 20 ಡಿಗ್ರಿ. ಗುರು – ಧನು 0 ರಿಂದ 10 ಡಿಗ್ರಿ. ಶುಕ್ರ – ತುಲಾ 0 ರಿಂದ 15 ಡಿಗ್ರಿ. ಶನಿ – ಕುಂಭ 0 ರಿಂದ 20 ಡಿಗ್ರಿ. ರಾಹು, ಕೇತುಗಳ ಮೂಲತ್ರಿಕೋಣ ಅಸ್ಪಷ್ಟ. (ಕರ್ಕ, ಮಕರ ಅಥವಾ ಕುಂಭ, ಸಿಂಹ ಅಥವಾ ಸಿಂಹ, ಕುಂಭ) ಲಗ್ನಾದಿ ದ್ವಾದಶ ಭಾವಗಳು-ಸ್ಥಾನಗಳು ಜಾತಕ ಅಥವಾ ಕುಂಡಲಿಗಳಲ್ಲಿ ಹನ್ನೆರಡು ಮನೆಗಳಿರುತ್ತವೆ, ಅವುಗಳನ್ನು ಭಾವ ಅಥವಾ ಸ್ಥಾನಗಳೆಂದು ಕರೆಯಲಾಗುತ್ತದೆ. ಈ ಹನ್ನೆರಡು ಭಾವಗಳು ಮನುಷ್ಯನ ಜೀವನದ ವಿವಿಧ ವಿಷಯಗಳ ಸೂಚಕಗಳಾಗಿವೆ. ದ್ವಾದಶ ಭಾವಗಳ ಸೂಕ್ಷ್ಮ ಪರಿಚಯವು ಜ್ಯೋತಿಷ್ಯ ಮತ್ತು ಫಲನಿರ್ದೇಶಕ್ಕೆ ಅತ್ಯಂತ ಅವಶ್ಯಕ. ಈ ಲೇಖನದಲ್ಲಿ ಇವುಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಜಾತಕವನ್ನು ಬರೆಯುವ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ ಉತ್ತರದೇಶ ಮತ್ತು ದಕ್ಷಿಣದೇಶೀಯ ಎಂಬ ಎರಡು ಪ್ರಕಾರಗಳು ಪ್ರಸಿದ್ಧ. ನಾನು ಹೆಚ್ಚು ಉತ್ತರದೇಶೀಯ ಕುಂಡಲಿಪ್ರಕಾರವನ್ನು ಅನುಸರಿಸುತ್ತೇನೆ, ಈ ಪ್ರಕಾರಕ್ಕೆ ಕೆಲವು ಸೌಲಭ್ಯಗಳಿವೆ. ಆದರೆ ಎಲ್ಲ ಲೇಖನಗಳಲ್ಲಿ ಮೇಲೆ ಹೇಳಿದ ಎರಡೂ ಪ್ರಕಾರಗಳನ್ನು ಕೊಡುತ್ತೇನೆ. (ಕೆಳಗೆ ಕೊಟ್ಟಿರುವ ಎರಡು ಚಿತ್ರಗಳನ್ನು ನೋಡಿ, ಸ್ಥಾನಗಳನ್ನು ಎಣಿಸುವ ಪ್ರಕಾರವನ್ನು ತಿಳಿದುಕೊಳ್ಳಿ). ಈ ಜಾತಕಗಳನ್ನು ನೋಡುವ (ಅಥವಾ ಓದುವ) ರೀತಿಯು ಸ್ವಲ್ಪ ಭಿನ್ನವಾಗಿದ್ದು ಈ ಬಗ್ಗೆ ಮುಂಬರುವ ಲೇಖನಗಳಲ್ಲಿ ಹೇಳುತ್ತೇನೆ. ಜಾತಕವನ್ನು ಜನ್ಮ ಕುಂಡಲಿ, ಜನ್ಮ ಪತ್ರಿಕೆ, ಜನ್ಮ ಚಕ್ರ ಇತ್ಯಾದಿ ದೇಶ-ಭಾಷಾನುಸಾರಿಯಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಜನ್ಮ ಸಮಯದ ಗ್ರಹಗಳ ಗತಿ ಮತ್ತು ಆಕಾಶದಲ್ಲಿ ಅವುಗಳ ಸ್ಥಾನವಿಶೇಷಗಳನ್ನು ಗಣಿತಾಗತವಾಗಿ ಚಿತ್ರಿಸುವುದನ್ನೆ ಜಾತಕವೆಂದು ಸ್ಥೂಲವಾಗಿ ಕರೆಯಬಹುದು. ಜಾತಕಗಳ ರಚನೆಗೆ ಪಂಚಾಂಗಗಳು ಅವಶ್ಯಕ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ