Skip to main content

ಮನೆ ಔಷಧಗಳು ಮತ್ತು ಜನಪ್ರಿಯ ನಂಬಿಕೆಗಳು

ಮನೆ ಔಷಧಗಳು ಮತ್ತು ಜನಪ್ರಿಯ ನಂಬಿಕೆಗಳು ಭೂಮಿಯ ಮೇಲೆ ಎಲ್ಲಾ ಕಡೆಗಳಲ್ಲೂ ಮನೆ ಔಷಧಿಗಳ ಉಪಯೋಗವಿದೆ. ಕೆಲವು ಕಡೆಗಳಲ್ಲಿ ಹಳೆಯ ಸಾಂಪ್ರದಾಯಿಕ ಔಷಧ ಪದ್ದತಿಗಳು ತಾಯಿಯಿಂದ ಮಕ್ಕಳಿಗೆ, ಮೊಮ್ಮೊಕ್ಕಳಿಗೆ ಎಂದು ನೂರಾರು ವರ್ಷಗಳಿಂದ ವಂಶ ಪಾರಂಪರ್ಯವಾಗಿ ಹರಿದು ಬಂದಿರುತ್ತವೆ. ಇಂಥ ಮನೆ ಔಷಧಗಳಲ್ಲಿ ಹೆಚ್ಚಿನವು ಉಪಯುಕ್ತವಾಗಿವೆ. ಆದರೆ ಇನ್ನು ಕೆಲವು ಪ್ರಯೋಜನ ಇಲ್ಲದವು. ಕೆಲವೊಂದರಲ್ಲಿ ಅಪಾಯ ಕೂಡ ಇದೆ. ಆದ್ದರಿಂದ ಇಂದಿನ ಔಷಧಗಳಂತೆಯೇ ಹಳೆಯ, ಮನೆ ಔಷಧಗಳನ್ನು ಉಪಯೋಗಿಸುವಾಗ ಕೂಡ ಎಚ್ಚರಿಕೆ ಅಗತ್ಯ. ಮನೆ ಔಷಧಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದಾಗ ಮತ್ತು ಅವು ಕ್ಷೇಮಕರ ಎಂಬುದರ ಬಗ್ಗೆ ಖಾತ್ರಿ ಇದ್ದಾಗ ಮತ್ತು ಹೇಗೆ ಉಪಯೋಗಿಸಬೇಕೆಂದು ಗೊತ್ತಿರುವಾಗ ಮಾತ್ರ ಉಪಯೋಗಿಸಿ. ಉಪಯುಕ್ತ ಮನೆ ಔಷಧಗಳು ಸಣ್ಣಪುಟ್ಟ ಕಾಯಿಲೆಗಳಿಗೆ ಮನೆ ಔಷಧಗಳು ಹೊಸ ಔಷಧಗಳಂತೆ ಅಥವಾ ಅದಕ್ಕೂ ಚೆನ್ನಾಗಿ ಕೆಲಸ ಮಾಡಬಲ್ಲವು. ಹೆಚ್ಚು ಕ್ಷೇಮಕರವೂ ಹೌದು. ಉದಾಹರಣೆಗೆ ಥಂಡಿ, ನೆಗಡಿಗಳಿಗೆ ಉಪಯೋಗಿಸುವ ಕಷಾಯಗಳು. ಇವು ಕೆಮ್ಮಿನ ಔಷಧಗಳಿಗಿಂತ ಹೆಚ್ಚು ಕ್ಷೇಮಕರ. ಎಷ್ಟೋ ತಾಯಂದಿರು ಮಕ್ಕಳಿಗೆ ಭೇದಿ ಆದಾಗ ಗಂಜಿ, ಕಷಾಯ ಮತ್ತು ಸಿಹಿಯಾದ ದ್ರವವನ್ನು ಕುಡಿಯಲು ಕೊಡುತ್ತಾರೆ. ಹೊಸ ಔಷಧಗಳಿಗಿಂತ ಇದು ಹೆಚ್ಚು ಉಪಯುಕ್ತ ಮತ್ತು ಕ್ಷೇಮಕರವೂ ಹೌದು. ಮಗುವಿಗೆ ಸಾಕಷ್ಟು ದ್ರವವು ಹೊಟ್ಟೆಗೆ ಹೋಗುತ್ತದೆಂಬುದೇ ಇಲ್ಲಿ ಮುಖ್ಯ. ಕೆಮ್ಮು ನೆಗಡಿ ಮತ್ತು ಭೇದಿಯಂಥ ಸಾಮಾನ್ಯ ಕಾಯಿಲೆಗಳಿಗೆ ನಾರು ಬೇರುಗಳ ಕಷಾಯ ಹೆಚ್ಚು ಉಪಯುಕ್ತ, ಕಡಿಮೆ ಬೆಲೆಯದು ಮತ್ತು ಕ್ಷೇಮಕರ. ಮನೆ ಔಷಧಗಳ ಕೆಲವು ಇತಿಮಿತಿಗಳು ಕೆಲವೊಂದು ಕಾಯಿಲೆಗಳಿಗೆ ಮನೆ ಔಷಧಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಇನ್ನೂ ಕೆಲವಕ್ಕೆ ಹೊಸ ಔಷಧಗಳೇ ಉತ್ತಮ. ಗಂಭೀರವಾದ ಸಾಂಕ್ರಾಮಿಕ ಕಾಯಿಲೆಗಳಾದ ನ್ಯುಮೋನಿಯಾ, ಧನುರ್ವಾಯು, ಟೈಫಾಯಿಡ್, ಕ್ಷಯ, ಅಪೆಂಡಿಸೈಟಿಸ್, ಲೈಂಗಿಕ ರೋಗಗಳು, ಮಗು ಹುಟ್ಟಿದ ನಂತರ ತಾಯಿಗೆ ಬರುವ ಜ್ವರ ಇವುಗಳಿಗೆಲ್ಲ ಆದಷ್ಟು ಬೇಗನೆ ಆಧುನಿಕ ಔಷಧಗಳನ್ನು ಕೊಡುವುದು ಒಳ್ಳೆಯದು. ಅವುಗಳಿಗೆ ಮನೆ ಔಷಧಗಳನ್ನು ಮಾಡುತ್ತ ಸಮಯ ಕಳೆಯಬಾರದು. ಮನೆ ಔಷಧಗಳಲ್ಲಿ ಯಾವುದು ಒಳ್ಳೆಯದು, ಯಾವುದು ಪ್ರಯೋಜನವಿಲ್ಲ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಈ ಬಗ್ಗೆ ಇನ್ನೂ ಅಧ್ಯಯನಗಳಾಗಬೇಕು. ಗಂಭೀರವಾದ ಕಾಯಿಲೆಗಳಿಗೆ ಆರೋಗ್ಯ ಕಾರ್ಯಕರ್ತರ ಸಲಹೆ ಪಡೆದು ಹೊಸ ಔಷಧಗಳನ್ನೇ ಉಪಯೋಗಿಸುವುದು ಒಳ್ಳೆಯದು. ಹಳೆಯ ಮತ್ತು ಹೊಸ ಪದ್ದತಿಗಳು ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳಿಗೆ ಹೊಸ ವಿಧಾನಗಳು ಒಳ್ಳೆಯ ಕೆಲಸ ಮಾಡುತ್ತವೆ. ಆದರೆ ಇನ್ನೂ ಕೆಲವು ವೇಳೆ ಹಳೆಯ ಔಷಧಗಳೇ ಉತ್ತಮ. ಉದಾಹರಣೆಗೆ ಮಕ್ಕಳನ್ನು ಬೆಳೆಸುವಲ್ಲಿ ಹಳೆಯ ವಿಧಾನಗಳೇ ಹೆಚ್ಚು ಮಮತೆ ಮತ್ತು ಪ್ರೀತಿಯಿಂದ ಕೂಡಿದ್ದು, ಹೊಸ ವಿಧಾನಗಳಲ್ಲಿ ಮಮತೆ, ಪ್ರೀತಿಗಳಿಗೆ ಮಹತ್ವ ಕಡಿಮೆ. ಕೆಲವೇ ವರ್ಷಗಳ ಹಿಂದೆ ಕೂಡಾ ತಾಯಿ ಹಾಲೇ ಶ್ರೇಷ್ಠ ಎಂಬ ಭಾವನೆ ಇತ್ತು. ಅದು ಸರಿ ಕೂಡ. ಆದರೆ ಕೃತಕವಾಗಿ ಹಾಲು ತಯಾರಿಸುವ ಡಬ್ಬಿಯ ಆಹಾರ ತಯಾರಿಸುವ ಕಂಪನಿಗಳು ಬಾಟ್ಲಿ ಹಾಲು ಹೆಚ್ಚು ಒಳ್ಳೆಯದೆಂದು ಪ್ರಚಾರ ಮಾಡತೊಡಗಿದವು. ಇದು ತಪ್ಪು. ಆದರೆ ಬಹಳಷ್ಟು ತಾಯಂದಿರು ಕಂಪನಿಗಳ ಮಾತನ್ನು ನಂಬಿದರು. ಮಕ್ಕಳಿಗೆ ಬಾಟ್ಲಿ ಹಾಲು ರೂಢಿ ಮಾಡತೊಡಗಿದರು. ಪರಿಣಾಮವಾಗಿ ಸಾವಿರಾರು ಶಿಶುಗಳು ಸಾಂಕ್ರಾಮಿಕ ರೋಗ ಮತ್ತು ಹಸಿವಿನಿಂದ ಸಾಯಬೇಕಾಯಿತು. ಈ ಎಲ್ಲ ಮಕ್ಕಳ ಸಾವನ್ನು ತಪ್ಪಿಸಬಹುದಿತ್ತು. (ತಾಯಿಯ ಹಾಲೇ ಶ್ರೇಷ್ಠ ಏಕೆ ಎಂದು ತಿಳಿಯಲು ೪೦೬ ನೇ ಪುಟ ನೋಡಿ.) ಜನರನ್ನು ರೋಗ ಮುಕ್ತ ಮಾಡುವ ನಂಬಿಕೆಗಳು ಕೆಲವೊಂದು ಮನೆ ಔಷಧಿಗಳು ರೋಗಕ್ಕೆ ನೇರ ಮದ್ದಾಗಿರಬಹುದು. ಇನ್ನೂ ಕೆಲವುಗಳಲ್ಲಿ ಜನರಿಗೆ ಬಲವಾದ ನಂಬಿಗೆ ಇರುವುದರಿಂದಲೇ ಅವು ಕೆಲಸ ಮಾಡಬಹುದು. ನಂಬಿಕೆಯ ಬಲ ಬಹಳ ಶಕ್ತಿಯುತವಾದುದು. ಉದಾಹರಣೆಗೆ ನನಗೆ ಗೊತ್ತಿದ್ದ ಒಬ್ಬಾತನಿಗೆ ತಲೆನೋವಿನ ಕಾಟವಿತ್ತು. ಅವನಿಗೊಮ್ಮೆ ಒಬ್ಬ ಹೆಂಗಸು, ಗೆಣಸು ತಿಂದರೆ ತಲೆನೋವು ಹೋಗುವುದೆಂದು, ಅದು ಒಳ್ಳೆಯ ನೋವು ನಿವಾರಕವೆಂದೂ ಹೇಳಿದಳು. ಆಕೆಯ ಹೇಳಿಕೆಯನ್ನು ಬಲವಾಗಿ ನಂಬಿದ ಆತನಿಗೆ ಗೆಣಸು ತಿನ್ನುತ್ತಲೇ ತಲೆ ನೋವು ಮಂಗಮಾಯ. ಇದರಲ್ಲಿ ತಲೆನೋವನ್ನು ಗುಣಪಡಿಸಿದ್ದು ಆತನ ನಂಬಿಕೆಯೇ ಹೊರತು ಗೆಣಸಲ್ಲ ಎಂಬುದು ಸ್ಪಷ್ಟ. ಜನರ ನಂಬಿಕೆಗಳನ್ನು ಗೌರವಿಸಿ. ಆ ನಂಬಿಕೆಗಳ ಆಧಾರದ ಮೇಲೆಯೇ ಕೆಲಸ ಮಾಡಿ. ಮನೆ ಔಷಧಗಳಲ್ಲಿ ಹೆಚ್ಚಿನವು ಕೆಲಸ ಮಾಡುವುದು ಈ ರೀತಿಯಲ್ಲಿ. ಜನರಿಗೆ ಅವುಗಳಲ್ಲಿ ನಂಬಿಕೆ ಬಹಳ. ಹಾಗಾಗಿ ರೋಗಗಳು ದೈಹಿಕಕ್ಕಿಂತ ಹೆಚ್ಚಾಗಿ ಮಾನಸಿಕ ಕಾರಣದಿಂದಲೇ. ಉದಾಹರಣೆಗೆ, ವ್ಯಕ್ತಿಯ ನಂಬಿಕೆ, ಚಿಂತೆ, ಇವುಗಳಿಂದಲೇ ರೋಗ ಬಂದಿದ್ದಾಗಿದ್ದರೆ ಅಂಥ ಕಡೆ ಮನೆ ಔಷಧಗಳ ಪ್ರಯೋಜನ ಹೆಚ್ಚು. ಈ ಗುಂಪಿನಲ್ಲಿ ಸೇರಬಹುದಾದ ರೋಗಗಳಲ್ಲಿ ಮಾಟ ಮಂತ್ರದ ಭ್ರಮೆ, ಅಕಾರಣವಾದ ಹೆದರಿಕೆ, ನಿರ್ದಿಷ್ಟವಲ್ಲದ ನೋವುಗಳು, ಚಿಂತೆ, ಹೆದರಿಕೆ, ಭ್ರಮೆ, ಕೆಲವೊಂದು ಜಾತಿಯ ಅಸ್ತಮಾ, ಬಿಕ್ಕಳಿಕೆ, ಅಜೀರ್ಣ, ಹೊಟ್ಟೆಯ ಹುಣ್ಣು, ತೀವ್ರ ತಲೆ ನೋವು, ಇತ್ಯಾದಿ ಪ್ರಮುಖವಾದವುಗಳು. ಇವೆಲ್ಲ ಸಮಸ್ಯೆಗಳಿಗೂ ಕೈಗುಣ ಕೂಡ ಅಷ್ಟೇ ಮುಖ್ಯ. ಇಲ್ಲಿ ಗುಣಪಡಿಸಲು ಅತಿ ಅಗತ್ಯವಾದದ್ದು, ರೋಗಿಯ ರೋಗದ ಬಗ್ಗೆ ನಿಮಗೆ ಕಾಳಜಿ ಇದೆ ಎಂಬುದು. ಆತನ ರೋಗ ಗುಣ ಆಗಲಿಕ್ಕೆ ಸಾಧ್ಯವಿದೆ ಎಂದು ಆತನಿಗೆ ನಂಬಿಕೆ ಬರುವಂತೆ ಮಾಡುವುದು, ಅಥವಾ ಆತನ ಚಿಂತೆ ದೂರ ಮಾಡಿ ಆರಾಮವಾಗಿರುವಂತೆ ಮಾಡುವುದು ಇವುಗಳೇ ಆಗಿವೆ. ಎಷ್ಟೋ ಬಾರಿ ಔಷಧದ ಮೇಲೆ ವ್ಯಕ್ತಿಯ ನಂಬಿಕೆಗಳು ಆತನ ದೈಹಿಕ ತೊಂದರೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಬಹುದು. ಉದಾಹರಣೆಗೆ ವಿಷಹಾವು ಕಚ್ಚಿದ್ದಕ್ಕೆ ಹಳ್ಳಿಗಳಲ್ಲಿ ಈ ಮನೆ ಔಷಧಗಳಿವೆ. ೧. ಹಾವಿನ ಚಿಪ್ಪುಗಳ ಉಪಯೋಗ ೨. ಒಂದು ಮುಷ್ಠಿ ಬೇವಿನ ಸೊಪ್ಪು ತಿನ್ನುವುದು ೩. ಬಾಳೆಗಿಡದಿಂದ ತೆಗೆದ ಒಂದು ಬಕೆಟ್ ನೀರನ್ನು ಕುಡಿಯುವುದು ಇದೇ ರೀತಿ ಹಾವಿನ ವಿಷಕ್ಕೆ ಬೇರೆ ಬೇರೆ ದೇಶಗಳಲ್ಲಿ ಇನ್ನೂ ಬೇರೆ ಬೇರೆ ರೀತಿಯ ಮನೆ ಔಷಧಗಳು ಇವೆ. ಈಗಾಗಲೇ ತಿಳಿದಿರುವಂತೆ ಈ ಯಾವ ಔಷಧಗಳೂ ಹಾವಿನ ವಿಷಕ್ಕೆ ಪ್ರತಿವಿಷ ಅಲ್ಲವೇ ಅಲ್ಲ. ಹಾವಿನ ಕಡಿತಕ್ಕೆ ಮನೆಮದ್ದು ಉಪಯೋಗಕ್ಕೆ ಬಂತು ಎಂದು ಜನರು ಉದಾಹರಣೆ ಸಹಿತ ಹೇಳಬಹುದು. ಆದರೆ ಅಂಥ ಉದಾಹರಣೆಗಳಲ್ಲಿ ಕಚ್ಚಿದ್ದು ಬಹುಶಃ ವಿಷದ ಹಾವೇ ಅಲ್ಲದಿರಬಹುದು. ಕಡಿದದ್ದು ವಿಷದ ಹಾವೇ ಆಗಿದ್ದರೂ ಸಹ ಆ ವ್ಯಕ್ತಿಗೆ ಈ ಔಷಧಗಳಲ್ಲಿ ನಂಬಿಕೆ ಇತ್ತೆಂದರೆ ಅವು ಸ್ವಲ್ಪ ಪ್ರಮಾಣದಲ್ಲಿ ಸಹಾಯವಾಗಬಹುದು. ಅದನ್ನು ತೆಗೆದುಕೊಂಡಿದ್ದಕ್ಕೆ ಆತನ ಹೆದರಿಕೆ ಕಡಿಮೆ ಆಗಿ ನಾಡಿಬಡಿತ ಹಿಡಿತಕ್ಕೆ ಬರುತ್ತದೆ. ಆತ ಬಿದ್ದುಕೊಂಡಿರದೆ ಎದ್ದು ಚಲಿಸಬಹುದು. ಈ ಎಲ್ಲದರ ಪರಿಣಾಮವಾಗಿ ವಿಷ ಹರಡುವ ವೇಗ ಕಡಿಮೆ ಆಗುತ್ತದೆ. ಪರಿಣಾಮ: ಜೀವಕ್ಕೆ ಅಪಾಯ ಕಡಿಮೆ ಆಗುತ್ತದೆ. ಆದರೂ ಇಂಥ ಮನೆ ಔಷಧಗಳಿಗೂ ಮಿತಿ ಇದೆ. ಹಾವು ಕಡಿತದಿಂದ ಸಾಯುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ನಮಗೆ ಗೊತ್ತಿರುವಂತೆ; ಹಾವು ಚೇಳು ಅಥವಾ ಇನ್ನಾವುದೇ ವಿಷಜಂತುಗಳ ಕಡಿತಕ್ಕೆ ಮನೆಮದ್ದುಗಳ ಮೇಲಿರುವ ನಂಬಿಕೆಗಳು ಸ್ವಲ್ಪ ಪರಿಣಾಮ ಬೀರಬಹುದೇ ಹೊರತು ಅವು ಗುಣಕಾರಿ ಆಗಲಾರದು. ಹಾವಿನ ವಿಷಕ್ಕೆ ಹೊಸ ಔಷಧಗಳೇ ಸರಿ. ಅದಕ್ಕಾಗಿ ತಯಾರಾಗಿರಿ. ಎಂಟಿವೆನಂ ಸಿರಂಗಳನ್ನು ನಿಮ್ಮ ಬಳಿ ತಯಾರಿಟ್ಟುಕೊಂಡಿರಿ. ಒಬ್ಬರಿಗೆ ಹಾವು ಕಚ್ಚುವರೆಗೆ ಕಾಯಬೇಡಿ. ರೋಗ ತರಬಲ್ಲ ನಂಬಿಕೆಗಳು ನಂಬಿಕೆಗಳು ರೋಗ ಗುಣಮಾಡುವಂತೆಯೇ ರೋಗವನ್ನು ತರಲೂಬಹುದು. ವ್ಯಕ್ತಿ ಯಾವುದೋ ಒಂದು ತನಗೆ ಅಪಾಯ ತರಬಹುದೆಂದು ಬಲವಾಗಿ ನಂಬಿದ್ದಾದರೆ ಆ ಹೆದರಿಕೆಯೇ ಆತನಿಗೆ ರೋಗ ತರಬಹುದು. ಉದಾಹರಣೆಗೆ; ಒಬ್ಬ ಹೆಂಗಸಿಗೆ ಅದೇ ಗರ್ಭಪಾತವಾಗಿತ್ತು. ದೇಹದಿಂದ ಇನ್ನೂ ರಕ್ತ ಹೋಗುತ್ತಿತ್ತು. ಅಂಥ ಪರಿಸ್ಥಿತಿಯಲ್ಲಿ ಅವಳನ್ನು ನೋಡಿದ ನಾನು ಹತ್ತಿರವೇ ಇದ್ದ ಕಿತ್ತಳೆ ಗಿಡದಿಂದ ಹಣ್ಣನ್ನು ಕೊಯ್ದು ರಸವನ್ನು ಕುಡಿಯಲು ಸೂಚಿಸಿದೆ. (ಕಿತ್ತಳೆಯಲ್ಲಿ ವಿಟಮಿನ್ ಸಿ ಇದೆ. ವಿಟಮಿನ್ ಸಿ ಯಿಂದ ರಕ್ತನಾಳಗಳು ಬಲಗೊಳ್ಳುತ್ತವೆ.) ಆಕೆಗೆ ಕಿತ್ತಳೆ ರಸದ ಈ ಔಷಧಿಯಲ್ಲಿ ನಂಬಿಕೆ ಇರಲಿಲ್ಲ. ಆದರೂ ನನ್ನ ಒತ್ತಾಯಕ್ಕೆ ಕುಡಿದಳು. ಆದರೆ ಆಕೆಯ ಭಯ ಅದೆಷ್ಟು ಜೋರಾಗಿತ್ತು ಎಂದರೆ ಕಿತ್ತಳೆ ರಸ ಕುಡಿಯುತ್ತಿದ್ದಂತೆಯೇ ಅವಳ ರೋಗ ಹೆಚ್ಚಿತು. ಪರೀಕ್ಷಿಸಿದಾಗ ಆಕೆ ದೈಹಿಕವಾಗಿ ಆರಾಮವಾಗೇ ಇದ್ದಳು. ಆಕೆಯನ್ನು ಸಾಂತ್ವನಗೊಳಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ತಾನು ಸತ್ತೇ ಹೋಗುತ್ತೇನೆಂದು ಆಕೆ ಬಡಬಡಿಸತೊಡಗಿದಳು. ಬೇರೆ ಉಪಾಯ ಕಾಣದೇ ಶುದ್ದ ನೀರನ್ನು ತೆಗೆದುಕೊಂಡು ಅವಳಿಗೆ ಇಂಜೆಕ್ಷನ್ ಮಾಡಿದೆ. ಅವಳಿಗೆ ಇಂಜೆಕ್ಷನ್ ಮೇಲಿನ ನಂಬಿಕೆ ಕೂಡ ಅದೆಷ್ಟು ಬಲವಾಗಿತ್ತೆಂದರೆ ಕೂಡಲೇ ಗುಣಮುಖಳಾಗತೊಡಗಿದಳು. ನಿಜವೆಂದರೆ ಶುದ್ದ ನೀರು ಯಾವುದೇ ರೀತಿಯ ಔಷಧ ಖಂಡಿತ ಅಲ್ಲ. ಇಲ್ಲಿ ಹೆಂಗಸಿಗೆ ಕಾಯಿಲೆ ಜೋರಾಗಲಿಕ್ಕೆ ಕಾರಣ ಕಿತ್ತಳೆ ರಸವಾಗಿರಲಿಲ್ಲ. ಗುಣವಾಗಲಿಕ್ಕೆ ಕಾರಣ ಇಂಜೆಕ್ಷನ್ನೂ ಆಗಿರಲಿಲ್ಲ. ಬದಲಿಗೆ ಅವೆರಡರ ಬಗ್ಗೆ ಆಕೆಗಿದ್ದ ಬಲವಾದ ನಂಬಿಕೆಗಳೇ ಆ ಕೆಲಸ ಮಾಡಿದ್ದವು. ಈ ಮಹಿಳೆಗೆ ಗುಣವಾಗಲು ನಾನು ಸಹಾಯ ಮಾಡಿರಬಹುದು. ಆದರೂ ಸತ್ಯವಲ್ಲದ್ದನ್ನು ನಂಬಲು ಸಹಾಯ ಮಾಡಿದೆನೆಂಬ ಇರುಸು ನನ್ನನ್ನು ಪದೇ ಪದೇ ಕಾಡುತ್ತದೆ. ಕೆಲ ದಿನಗಳ ನಂತರ ಆಕೆಗೆ ಪೂರ್ತಿ ಹುಷಾರಾದ ನಂತರ ನಾನು ಹೋಗಿ ನಾನು ಮಾಡಿದ್ದನ್ನು ಅವಳಿಗೆ ಹೇಳಿ ಅವಳ ಕ್ಷಮೆ ಕೇಳಿದೆ. ಕಿತ್ತಳೆ ರಸದಿಂದ ಬೇನೆ ಹೆಚ್ಚಾಗಿದ್ದು, ನೀರಿನ ಇಂಜೆಕ್ಷನ್ ಮಾಡಿದ ನಂತರ ಗುಣವಾಗಿದ್ದು ಎರಡೂ ಸುಳ್ಳು. ಅವಳ ನಂಬಿಕೆಯೇ ಅಲ್ಲಿ ಕೆಲಸ ಮಾಡಿದ್ದೆಂದು ತಿಳಿಸಿ ಹೇಳಿದೆ. ಇದನ್ನು ತಿಳಿದ ನಂತರ ಅವಳು ಮತ್ತು ಅವಳ ಕುಟುಂಬದವರು ಸುಳ್ಳು ಭ್ರಮೆಗಳ ಬಗ್ಗೆ ಹೆಚ್ಚು ತಿಳುವಳಿಕೆಯುಳ್ಳವರಾಗಿ ಹೆದರಿಕೆಯಿಂದ ಮುಕ್ತರಾಗಿದ್ದಾರೆಂದು ನಾನು ಆಶಿಸುತ್ತೇನೆ. ಏಕೆಂದರೆ ಆರೋಗ್ಯಕ್ಕೆ ಸರಿಯಾದ ತಿಳುವಳಿಕೆ ಮತ್ತು ಭಯದಿಂದ ಮುಕ್ತಿ ಎರಡೂ ಅಗತ್ಯ. ಎಷ್ಟೋ ವಸ್ತುಗಳು ಅಪಾಯಕಾರಿ ಎಂದು ಜನರು ಬಲವಾಗಿ ನಂಬಿರುವುದರಿಂದಲೇ ಅಪಾಯಕಾರಿ ಆಗಿ ಪರಿಣಮಿಸಬಹುದು. ಮಾಟ ಮಂತ್ರ ಮದ್ದು ಮತ್ತು ಕೆಟ್ಟ ದೃಷ್ಟಿ ಇತ್ಯಾದಿ; ಬೇರೆ ಯಾವನೋ ಒಬ್ಬ ತನಗೆ ತೊಂದರೆ ಕೊಡಬಹುದು ಎಂದು ಯಾರಾದರೂ ಬಲವಾಗಿ ನಂಬಿದರೆ ಆತ ನಿಜವಾಗಿಯೂ ಹೆದರಿಕೆಯಿಂದ ಹಾಸಿಗೆ ಹಿಡಿಯಬಹುದು. ತನಗೆ ಯಾರೋ ಮಾಟ ಮಾಡಿಸಿದ್ದಾರೆ ಯಾರದೋ ಕೆಟ್ಟ ದೃಷ್ಟಿ ತಾಗಿದೆ ಎಂದು ತಿಳಿದರೆ ಆತ ತನ್ನದೇ ಭಯದ ಬಲಿಪಶುವಾಗುತ್ತಾನೆ. ಮಾಟ ಮಾಡುವವರಿಗೆ ಯಾರ ಮೇಲೂ ಒಳ್ಳೆಯದು ಅಥವಾ ಕೆಟ್ಟದು ಮಾಡಬಲ್ಲ ಶಕ್ತಿ ಇರುವುದಿಲ್ಲ. ಆದರೆ ಅವರು ತಮ್ಮಲ್ಲಿ ಅಂಥ ಶಕ್ತಿ ಇದೆಯೆಂದು ಜನರನ್ನು ನಂಬಿಸುತ್ತಾರೆ. ಏಕೆಂದರೆ; ಮಾಟ ಮಂತ್ರಗಳನ್ನು ನಂಬದವರ ಮೇಲೆ ಮಾಟ ಮಾಡಲು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಜನರಿಗೆ ಅಪರೂಪದ ಅಥವಾ ಭಯಾನಕ ರೋಗ ತಗುಲಿತೆಂದರೆ ತಮ್ಮ ಮೇಲೆ ಮಾಟ ಮಾಡಲಾಗಿದೆ ಎಂದೇ ಭಾವಿಸುತ್ತಾರೆ. ಆದರೆ ಇಂಥ ರೋಗಗಳಿಗೂ ಮಾಟಕ್ಕೂ ಯಾವ ಸಂಬಂಧವೂ ಇಲ್ಲ. ಇವು ಸ್ವಾಭಾವಿಕವಾಗಿ ಬರುವ ರೋಗಗಳಷ್ಟೇ. ಮಾಟ ಮಂತ್ರಗಳಿಗೆ ಪ್ರತಿಮಂತ್ರ ಮಾಡುತ್ತೇವೆ ಎನ್ನುವಂಥ ಸ್ಥಳಗಳಲ್ಲಿನಿಮ್ಮ ಹಣ ಹಾಕಲು ಹೋಗಬೇಡಿ. ಇದರಿಂದ ಸಮಸ್ಯೆಗಳಿಗೆಪರಿಹಾರ ಸಿಗದು. ನಿಜಕ್ಕೂ ಗಂಭೀರವಾದ ರೋಗ ಬಂದಿದೆಯೆದರೆವೈದ್ಯಕೀಯ ಸಹಾಯದತ್ತ ಕೈ ಚಾಚಿ. ಮಾಟ ಮಂತ್ರ ಮಾಡುವವರಮೇಲೆ ವೈರತ್ವವೂ ಬೇಡ. ಅಪರೂಪದ ಕಾಯಿಲೆ ಮಾಂತ್ರಿಕರನ್ನು ಬಯ್ಯಬೇಡಿ. ಮದ್ದು ಮಾಡುವವರಲ್ಲಿಗೆ ವೈದ್ಯಕೀಯ ಸಹಾಯ ಬಂದರೆ, ಹೋಗಬೇಡಿ. ಪಡೆಯಿರಿ. ಗೃಹ ಔಷಧಿಗಳು ಮತ್ತು ಸಾಂಪ್ರದಾಯಿಕ ನಂಬಿಕೆಗಳ ಬಗ್ಗೆ ಕೆಲ ಪ್ರಶ್ನೆ ಮತ್ತು ಉತ್ತರಗಳು; ಈ ಕೆಳಗೆ ನಮ್ಮ ದೇಶದ ಬೇರೆ ಬೇರೆ ಕಡೆಯಲ್ಲಿ ಇರುವ ನಂಬಿಕೆಗಳನ್ನು ಕೊಟ್ಟಿದೆ. ಇವುಗಳಲ್ಲಿ ಕೆಲವು ನಿಮ್ಮಲ್ಲೂ ಇರಬಹುದು. ನಿಮ್ಮ ಕಡೆ ಇರುವ ಯಾವ ನಂಬಿಕೆಗಳು ಆರೋಗ್ಯಕ್ಕೆ ಒಳ್ಳೆಯದು, ಯಾವುದು ಅಲ್ಲ ಎಂಬುದನ್ನು ತಿಳಿಯಲು ಪ್ರಯತ್ನಿಸಿ. ಮಗುವಿಗೆ ತೀವ್ರ ವಾಂತಿಭೇದಿ ಆಗಿ ತಲೆಯ ಮುಂಭಾಗದಲ್ಲಿ ಮೆತ್ತನೆಯ ಕುಳಿ ಬೀಳಲಾರಂಭಿಸಿತೆಂದರೆ ಕೂಡಲೇ ಹೆಚ್ಚಿನ ಚಿಕಿತ್ಸೆ ಆಗಬೇಕು. ಇಲ್ಲವೆಂದರೆ ಮಗು ಸಾಯಬಹುದು, ಹೌದೇ? ಕೆಲವೊಮ್ಮೆ ಹೌದು. ಮಗುವಿನ ದೇಹದಿಂದ ಅಪಾರ ದ್ರವ ನಷ್ಟ ಆಗಿದೆಯೆಂದರೆ ನೆತ್ತಿಯ ಜಾಗ ಕುಸಿಯುತ್ತದೆ. (೨೩೩ ನೇ ಪುಟ) ಕೂಡಲೇ ಚಿಕಿತ್ಸೆ ಸಿಗದಿದ್ದರೆ ಮಗುವಿಗೆ ಗಂಡಾಂತರ (೨೩೬ ನೇ ಪುಟ). ಚಂದ್ರ ಗ್ರಹಣವಾದಾಗ ಆ ಬೆಳದಿಂಗಳು ಗರ್ಭಿಣಿಯ ಮೇಲೆ ಬಿದ್ದರೆ ಆಕೆಗೆ ಹುಟ್ಟುವ ಮಗು ಅಂಗವಿಕಲ ಆಗಬಹುದೇ? ತಪ್ಪು. ಚಂದ್ರ ಗ್ರಹಣಕ್ಕೂ ಹೊಟ್ಟೆಯೊಳಗಿರುವ ಮಗುವಿನ ಅಂಗವಿಕಲತೆಗೂ ಯಾವುದೇ ನೇರ ಸಂಬಂಧವಿಲ್ಲ. (ಮಾನಸಿಕ ವಿಕಲತೆಗೆ ೩೭೪ನೇ ಪುಟ ನೋಡಿ). ಕತ್ತಲೆ ಕೋಣೆಯಲ್ಲಿಯೇ ಹೆರಿಗೆ ಆಗಬೇಕೆ? ಮಂದ ಬೆಳಕು ತಾಯಿ ಮತ್ತು ಮಗುವಿನ ಕಣ್ಣುಗಳಿಗೆ ಕ್ಷೇಮಕರ. ಆದರೆ ದಾದಿಗೆ ತಾನು ಏನು ಮಾಡುತ್ತಿರುವೆನೆಂದು ಕಾಣಿಸುವಷ್ಟಾದರೂ ಬೆಳಕು ಬೇಕು. ಮಗು ಹುಟ್ಟಿದ ಒಂದೆರಡು ದಿನ ಬರುವ ಹಾಲು ಒಳ್ಳೆಯದಲ್ಲವಂತೆ? ತಪ್ಪು. ಈ ಹಾಲಿಗೆ ಕೋಲೊಸ್ಟ್ರಂ ಎನ್ನುತ್ತಾರೆ. ಇದರಲ್ಲಿ ಪ್ರೋಟೀನ್ ಅಂಶ ಮತ್ತು ಮಗುವನ್ನು ಸಾಂಕ್ರಾಮಿಕ ರೋಗದಿಂದ ರಕ್ಷಿಸಬಲ್ಲ ರೋಗನಿರೋಧಕಗಳು ಬಹಳ ಇರುತ್ತವೆ. ಮಗುವಿಗೆ ಇದು ಅತ್ಯುತ್ತಮ ಆಹಾರ. ಹಡೆದ ಎಷ್ಟು ದಿನಗಳ ನಂತರ ತಾಯಿ ಸ್ನಾನ ಮಾಡಬಹುದು? ಮಗು ಹುಟ್ಟಿದ ಮರು ದಿನವೇ ತಾಯಿ ಸ್ನಾನ ಮಾಡಬೇಕು. ವಾರಗಟ್ಟಲೇ ಸ್ನಾನ ಮಾಡದೇ ಉಳಿದರೆ ಸಾಂಕ್ರಮಿಕ ರೋಗಗಳು ತಗುಲುವ ಸಾಧ್ಯತೆ ಇದೆ. ಈಗಿನ ಬಾಟ್ಲಿ ಹಾಲಿಗಿಂತ ಸಾಂಪ್ರದಾಯಿಕ ಮೊಲೆ ಹಾಲು ಕುಡಿಸುವುದೇ ಶ್ರೇಷ್ಟವಂತೆ ಹೌದೇ? ಹೌದು. ತಾಯಿ ಹಾಲು ಅತಿ ಶ್ರೇಷ್ಟ. ಅಲ್ಲದೇ ಇದು ಮಗುವನ್ನು ರೋಗದಿಂದ ರಕ್ಷಿಸುತ್ತದೆ. ಮಗು ಹುಟ್ಟಿದ ಮೊದಲ ಕೆಲವು ವಾರಗಳವರೆಗೆ ತಾಯಿ ಯಾವ ಯಾವ ಆಹಾರವನ್ನು ಸೇವಿಸಬಾರದು? ಹಡೆದ ನಂತರ ಮಹಿಳೆ ಯಾವುದೇ ಪೌಷ್ಟಿಕ ಆಹಾರವನ್ನೂ ದೂರ ಇಡಬಾರದು. ತರಕಾರಿ, ಹಣ್ಣು ಹಾಲು, ಮೊಟ್ಟೆ,ಮಾಂಸ ಎಲ್ಲವನ್ನೂ ಹೇರಳವಾಗಿ ತಿನ್ನಬೇಕು. (೩೨೯ ನೇ ಪುಟ ನೋಡಿ) ರೋಗಿಯನ್ನು ನಿತ್ಯ ಸ್ನಾನ ಮಾಡಿಸಬಹುದೇ? ಅಥವಾ ಅದರಿಂದ ತೊಂದರೆ ಇದೆಯೇ? ಸ್ನಾನ ಮಾಡಿಸುವುದೊಳ್ಳೆಯದು. ರೋಗಿಗೆ ನಿತ್ಯವೂ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಬಹುದು. ನೆಗಡಿಯಾದಾಗ ಕಿತ್ತಳೆ, ಪೇರಲೆ ಬಾಳೆಹಣ್ಣು ಮತ್ತಿತರ ಹಣ್ಣುಗಳು ಅಪಾಯಕಾರಿಯಂತೆ. ಹೌದೆ? ಇದು ಶುದ್ದ ತಪ್ಪು. ನೆಗಡಿಯಾದಾಗ, ಜ್ವರ ಬಂದಾಗ ಯಾವುದೇ ಹಣ್ಣಿನ ರಸವೂ ಅತೀ ಶ್ರೇಷ್ಠ. ಅದರಿಂದ ಯಾವುದೇ ರೀತಿಯ ಅಪಾಯವಿಲ್ಲ. ಜ್ವರ ಬಂದಾಗ ಹೊರಗಿನ ಗಾಳಿ ಆಡಿದರೆ ಅಪಾಯ ಎಂದು ರೋಗಿಯನ್ನು ಚೆನ್ನಾಗಿ ಹೊದೆಸಿ ಇಡಬೇಕೆ? ಶುದ್ದ ತಪ್ಪು. ಜ್ವರ ಜಾಸ್ತಿ ಇರುವಾಗ ಎಲ್ಲಾ ಹೊದಿಕೆಯನ್ನೂ ತೆಗೆದು ಹಾಕಬೇಕು. ಇದರಿಂದ ಗಾಳಿ ಆತನ ದೇಹಕ್ಕೆ ತಾಗಿ ಬೇಗ ಜ್ವರ ತಣಿಯುವಂತೆ ಮಾಡುತ್ತದೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ