Skip to main content

ಯುಗಾದಿ: ನಿತ್ಯ ನಂಬಿಕೆಯ ಬಿಂಬಗಳು

ಜೂಲಿಯಸ್ ಸೀಸರ್‌ನಿಂದ ಶಾಲಿವಾಹನ ಶಕೆಯವರೆಗೆ * ಚಿದಂಬರ ಭಟ್ಟ ಆರ್ ಜೋಶಿ ವಸಂತ ಋತುವಿನ ಆಗಮನವೆಂದರೆ ಸಂಭ್ರಮ ಪಲ್ಲವಿಸುವ ಸಮಯ. ಈ ಋತುರಾಜನ ಆಗಮನದೊಂದಿಗೆ ಯುಗಾದಿಯೂ ಬರುತ್ತದೆ. ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ ಯುಗಾದಿಯ ವೈಶಿಷ್ಟ್ಯದ ಉಲ್ಲೇಖವಿದೆ. 'ಯುಗ' ಎಂದರೆ- ನೂತನ ವರ್ಷ; 'ಆದಿ' ಎಂದರೆ- ಆರಂಭ. ಅಂದಹಾಗೆ, ಭಗವದ್ಗೀತೆಯ 'ವಿಭೂತಿ ಯೋಗ'ದಲ್ಲಿ ಶ್ರೀಕೃಷ್ಣನು 'ಋತುಗಳಲ್ಲಿ ವಸಂತವು ನಾನು' (ಋತೂನಾಂ ಕುಸುಮಾಕರಃ) ಎಂದು ಖುಷಿಯಿಂದ ಹೇಳಿಕೊಂಡಿದ್ದಾನೆ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, 'ಆನಂದಮಯ ಈ ಜಗ ಹೃದಯ' ಎಂಬ ಕವಿ ವಾಣಿಯ ಸತ್ಯದ ದರ್ಶನವಾಗುತ್ತದೆ. ಕ್ರಿಸ್ತಪೂರ್ವ 2000ದಷ್ಟು ಮೊದಲೇ ಮೆಸಪಟೋಮಿಯಾದಲ್ಲಿ ಹೊಸ ವರ್ಷ ಆಚರಿಸುವ ಪದ್ದತಿ ಇತ್ತು. ಬ್ಯಾಬಿಲೋನಿಯಾದಲ್ಲಿ ಮೇಷ ಮಾಸದ ಅಮಾವಾಸ್ಯೆಯಂದು, ಅಸ್ಸೀರಿಯಾದಲ್ಲಿ ತುಲಾ ಮಾಸದ ಅಮಾವಾಸ್ಯೆಯಂದು, ಪರ್ಷಿಯನ್ನರು ಮತ್ತು ಈಜಿಪ್ಶಿಯನ್ನು ತುಲಾ ಸಂಕ್ರಾಂತಿಯಂದು, ಗ್ರೀಕರು ಮಕರ ಸಂಕ್ರಾಂತಿಯಂದು ಹೊಸ ವರ್ಷವನ್ನು ಆಚರಿಸುತ್ತಿದ್ದರು. ಈಗ ನಾವು 'ಯುಗಾದಿ ಯಾವತ್ತು?' ಎಂದು ಯಾರಾದರೂ ಕೇಳಿದರೆ ನಮ್ಮ ಪಂಚಾಂಗ ನೋಡಿ ಥಟ್ಟನೆ ಉತ್ತರ ಹೇಳಬಹುದು ತಾನೇ? ಆದರೆ, ಇವುಗಳಲ್ಲಿ ನಮೂದಿಸಿರುವ ಎಣಿಕೆಗಳ ಹಿಂದೆ ಶತಶತಮಾನಗಳ ಶ್ರಮ, ಲೆಕ್ಕಾಚಾರ, ತಿದ್ದುಪಡಿ ಅಡಗಿದೆ. ಅಂದಹಾಗೆ ಮನುಷ್ಯನ ಪಾಲಿನ ಪ್ರಪ್ರಥಮ ಪಂಚಾಂಗವೆಂದರೆ ಆಕಾಶ. ಆಗಸದಲ್ಲಿ ಸೂ0ರ್ು ಮತ್ತು ಚಲಿಸುವ ಗ್ರಹಗಳ ಗತಿಗಳನ್ನು ಅಭ್ಯಸಿಸಿದಾಗ ಮೊದಲ ಪಂಚಾಂಗ ಜನ್ಮ ತಾಳಿತು. ಮೊಟ್ಟಮೊದಲಿಗೆ 24 ಗಂಟೆಗಳೆಂದರೆ ಒಂದು ದಿನ ಎಂದು ನಿಗದಿಪಡಿಸಿದ್ದು ಈಜಿಪ್ಶಿಯನ್ನರು. ಹಿಂದೆಲ್ಲಾ ಸೂರ್ಯಾಸ್ತದ ನಂತರದ ಕತ್ತಲಲ್ಲಿ ಏನೂ ಮಾಡಲಾಗದಿದ್ದಾಗ ನಭೋಮಂಡಲದ ವೀಕ್ಷಣೆಯೇ ಹೊತ್ತು ಕಳೆಯುವ ಮಾರ್ಗವಾಗಿತ್ತು. ಆ ಅಂಧಕಾರದಲ್ಲಿ ಒಮ್ಮೆ ಪೂರ್ಣ, ಇನ್ನೊಮ್ಮ ಅಪೂರ್ಣ, ಮತ್ತೊಮ್ಮೆ ಅದೃಶ್ಯವಾಗುತ್ತಿದ್ದ ಸುಂದರ ಚಂದ್ರನು ಮನುಷ್ಯನನ್ನು ಆಕರ್ಷಿಸಿದ. ಇದನ್ನು ಕಂಡೇ ಕೆಲವರು 'ಮಧ್ಯಮ ಸಪ್ತಾಂಶ'ವನ್ನು ಸೃಷ್ಟಿಸಿದರು. ಮುಂದೆ ಇದೇ ದಿನ ಹಾಗೂ ಮಾಸ ಕ್ಯಾಲೆಂಡರ್ ಪಂಚಾಂಗದ ಮೂಲ ಅಳತೆಗೋಲಾಯಿತು. ಚಾಂದ್ರಮಾನ ಹಾಗೂ ಸೌರಮಾನ ಪಂಚಾಂಗಗಳಲ್ಲಿ ಮೊದಲಿಗೆ ಮಳೆ-ಬೆಳೆ, ಪ್ರವಾಹ, ಸೂರ್ಯ-ಚಂದ್ರರ ಚಲನೆಯ ಗತಿಗಳು ಬೇರೆ ಇರುತ್ತಿದ್ದವು. ಈ ತಪ್ಪನ್ನು ಜೂಲಿಯಸ್ ಸೀಸರ್ ತನ್ನ ರಾಜಬಲ ಪ್ರಯೋಗಿಸಿ ಸರಿ ಮಾಡಿದ. 'ಮುನ್ನೂರರವತ್ತೈದೂ ಕಾಲು ದಿನಗಳಿಗೆ ಒಂದು ವರ್ಷ', 'ನಾಲ್ಕು ವರ್ಷಕ್ಕೊಮ್ಮೆ ಅಧಿಕ ವರ್ಷ' ಎನ್ನುವುದೆಲ್ಲ ಜಾರಿಗೆ ಬಂದಿದ್ದು ಅವನ ಕಾಲದಲ್ಲೇ. ಆದರೆ, ಇದರಲ್ಲೂ ಕೆಲ ಲೋಪಗಳಿದ್ದವು. ಮುಂದೆ 1582ರಲ್ಲಿ ಪೋಪ್ ಗ್ರೆಗೊರಿ ಇದನ್ನು ಇನ್ನಷ್ಟು ಸರಿಪಡಿಸಿದ. ಇದೇ 'ಗ್ರೆಗೊರಿಯನ್ ಕ್ಯಾಲೆಂಡರ್'. ಇಷ್ಟಾದರೂ ಹಲವು ಸಂಸ್ಕೃತಿಗಳು ವ್ಯವಹಾರಕ್ಕೆ ಈ ಕ್ಯಾಲೆಂಡರನ್ನು ಬಳಸಿದರೂ, ತಮ್ಮ ರೀತಿ-ರಿವಾಜು, ಹಬ್ಬ-ಹರಿದಿನ, ಮದುವೆ-ಮುಂಜಿ, ಶುಭ-ಅಶುಭ, ತಿಥಿ-ಮುಹೂರ್ತ, ಸಂಪ್ರದಾಯ-ಸಂಸ್ಕೃತಿಗಳಿಗೆಲ್ಲ ಶತಶತಮಾನಗಳಿಂದಲೂ ಚಾಂದ್ರಮಾನ ಪಂಚಾಂಗವನ್ನೇ ನೆಚ್ಚಿಕೊಂಡಿವೆ. ಈ ನಂಬಿಕೆಯನ್ನು ಯಾರಿಗೂ ಕದಲಿಸಲು ಸಾಧ್ಯವಾಗಿಲ್ಲ. ಇಸ್ಲಾಂ ಅನುಯಾಯಿಗಳು ಸಹ ಅನುಸರಿಸುವುದು ಚಾಂದ್ರಮಾನ ಪಂಚಾಂಗವನ್ನೇ. ಚೈತ್ರ ಶುಕ್ಲ ಪಾಡ್ಯದ ದಿನವೇ ಚಾಂದ್ರಮಾನ ಯುಗಾದಿ. ಇದು ಬರುವುದು ಮೇಷ ಸಂಕ್ರಮಣದ ಮೊದಲು ಬರುವ ಅಮಾವಾಸ್ಯೆಯ ಮಾರನೇ ದಿನ. ಅಂದರೆ, ಇಂಗ್ಲಿಷ್ ಕ್ಯಾಲೆಂಡರ್‌ನ ಮಾರ್ಚ್ 14ರಿಂದ ಏಪ್ರಿಲ್ 13ರ ಒಳಗೆಯೇ ಇರುತ್ತದೆ. ಆದರೆ ಸೌರಮಾನ ಯುಗದಿ ಮಾತ್ರ ಪ್ರತೀವರ್ಷವೂ ಏಪ್ರಿಲ್ 14ರಂದೇ ಬರುತ್ತದೆ. ವಾಲ್ಮೀಕಿ ಮಹರ್ಷಿಯ ರಾಮಾಯಾಣ ಮಹಾಕಾವ್ಯದ ಪ್ರಕಾರ, ರಾಮನು ರಾವಣನನ್ನು ಕೊಂದು ಅಯೋಧ್ಯೆಗೆ ಬಂದು ಆಳ್ವಿಕೆ ಆರಂಭಿಸಿದ್ದು ಯುಗಾದಿಯಂದೇ. ಯುಗಾದಿದ ಮಹತ್ವ ಪಾಶ್ಚಾತ್ಯರ ಪ್ರಭಾವದಿಂದ ಜನವರಿ 1ರಂದು ಹೊಸವರ್ಷದ ಆಡಂಬರ ನಡೆಯುತ್ತದೆ, ನಿಜ. ಆದರೂ ಯುಗಾದಿಯ ಭಾವಸಿಂಚನಕ್ಕೆ ಧಕ್ಕೆ ಉಂಟಾಗಿಲ್ಲ. ವಸಂತ ಋತುವಿನ ಚಿತ್ರಣವೇ ಯುಗಾದಿಯ ಚಿತ್ರಣ. ಯುಗಾದಿ ಹಬ್ಬಗಳ ಸಾಮ್ರಾಟನೂ ಹೌದು. ಯುಗಾದಿಯಲ್ಲಿ ಚಾಂದ್ರಮಾನ, ಸೌರಮಾನ, ಸಾವನಮಾನ, ನಕ್ಷತ್ರಮಾನ ಮತ್ತು ಬೃಹಸ್ಪತ್ಯಮಾನ ಎಂದು ಐದು ಪ್ರಕಾರ. ಕ್ರಿಸ್ತಶಕೆ ಆರಂಭವಾಗಿ ಎಪ್ಪತ್ತೆಂಟು ವರ್ಷಗಳ ತರುವಾಯ ಶುರುವಾಗಿದ್ದು ಶಾಲಿವಾಹನ ಶಕೆ. ದಕ್ಷಿಣ ಭಾರತದಲ್ಲಿ ಈಗಲೂ ಈ ಶಕೆ ಬಳಕೆಯಲ್ಲಿದೆ. ಶಕರು ಈ ದೇಶದ ಮೇಲೆ ದಾಳಿ ಮಾಡಿದಾಗ, ಅಂದು ನರ್ಮದಾ ಮತ್ತು ಕಾವೇರಿ ನಡಿಗಳ ನಡುವೆ ರಾಜ್ಯವಾಳುತ್ತಿದ್ದ ಶಾಲಿವಾಹನ, ಅವರ ಬಲವನ್ನು ಮುರಿದು ವಿಜಯ ಪತಾಕೆಯನ್ನು ಹಾರಿಸಿದ ದಿನ ಈ ಚೈತ್ರ ಶುದ್ಧ ಪ್ರತಿಪದೆ. ಕಮಲಾಕರ ಭಟ್ಟನ ಒಂದು ಬೃಹತ್ ಗ್ರಂಥವಿದೆ. ಅದೇ 'ನಿರ್ಣಯ ಸಿಂಧು'. ಅದರ ಪ್ರಕಾರ 'ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸೂರ್ಯೋದಯ ಕಾಲಕ್ಕೆ ಸರಿಯಾಗಿ ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷ, ವರ್ಷಾಧಿಪತಿಗಳನ್ನೂ ಸೃಷ್ಟಿಸಿ, ಕಾಲಗಣನೆ ಆರಂಭಿಸಿದ'. ಜೊತೆಗೆ ಈ ದಿನ ಯಾವ ವಾರವಾಗಿರುವುದೋ ಆ ವಾರಾಧಿಪತಿ ಆ ವರ್ಷ ರಾಜ. ಉದಾಹರಣೆಗೆ, ಯುಗಾದಿ ಈ ವರ್ಷ ಸೋಮವಾರ ಬಂದಿದೆ. ಆದ್ದರಿಂದ ಚಂದ್ರನೇ ಈ ವರ್ಷದ ರಾಜ. ಯುಗಾದಿಯ ದಿನವಾದ ಚೈತ್ರ ಶುದ್ಧ ಪ್ರತಿಪದೆಯಿಂದ ವಸಂತ ನವರಾತ್ರಿ ಆರಂಭ. ಇದಾದ ಆರು ತಿಂಗಳಿಗೆ ಸರಿಯಾಗಿ ಶರನ್ನವರಾತ್ರಿ ಬರುತ್ತದೆ. ವಾತಾವರಣದಲ್ಲಿ ಅಗಾಧ ಬದಲಾವಣೆ ಕಾಣುವ ಈ ಎರಡೂ ಋತುಗಳು ಭಕ್ತಿಗೆ ಪ್ರಶಸ್ತ ಮುಹೂರ್ತಗಳಾಗಿವೆ. ಇನ್ನೊಂದು ನಂಬಿಕೆಯ ಪ್ರಕಾರ, ಬ್ರಹ್ಮನು ಜಗತ್ತನ್ನು ಸೃಷ್ಟಿಸಿದ್ದು ಯುಗಾದಿಯಂದೇ. ಅಂದಿನಿಂದ ಕಾಲಗಣನೆಗಾಗಿ ಗ್ರಹ, ನಕ್ಷತ್ರ, ಋತು, ಮಾಸ, ತಿಥಿ ಇತ್ಯಾದಿಗಳನ್ನು ನಿಯೋಜಿಸನೆಂದು ಪುರಾಣಗಳು ಹೇಳುತ್ತವೆ. ಇದೇನೇ ಇರಲಿ, ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಚಾಂದ್ರಮಾನ ಯುಗಾದಿಗೆ ಇನ್ನಿಲ್ಲದ ಮಹತ್ತ್ವವಿದೆ. ಆದರೆ ಉತ್ತರ ಭಾರತೀಯರು ವಿಕ್ರಮ ಶಕೆ (ನಮ್ಮದು ಶಾಲಿವಾಹನ ಶಕೆ) ಅನುಸರಿಸುವುದರಿಂದ ದೀಪಾವಳಿಯ ಪಾಡ್ಯದಿಂದ ಅವರು ಹೊಸ ವರ್ಷ ಶುರು ಮಾಡುತ್ತಾರೆ. ಹಿಂದೂ ಸಂಪ್ರದಾಯದಲ್ಲಿ 'ಧರ್ಮಸಿಂಧು' ಎಂಬ ಒಂದು ಗ್ರಂಥವಿದೆ. ಅದು ಯುಗಾದಿ ಹಬ್ಬದ ದಿನಕ್ಕೆ ಸಂಬಂಧಿಸಿದಂತೆ ಈ ಐದು ವಿಧಿಗಳನ್ನು ಸೂಚಿಸಿದೆ- ತೈಲಾಭ್ಯಂಜನ (ಎಣ್ಣೆ ನೀರು), ದೇವತಾ ಸ್ತುತಿ, ಧರ್ಮ ಧ್ವಜಾರೋಹಣ, ನಿಂಬಕುಸುಮ ಭಕ್ಷಣ (ಬೇವಿನೆಲೆಯ ಸೇವನೆ) ಮತ್ತು ಪಂಚಾಂಗ ಶ್ರವಣ. ಈ ಪೈಕಿ ಪಂಚಾಂಗ ಶ್ರವಣ ಮಾತ್ರ ಸಾಮೂಹಿಕವಾಗಿ ನಡೆಯುತ್ತದೆ. ಇದು ಸಾಮಾನ್ಯವಾಗಿ ನಡೆಯುವುದು ಊರಿನ ಪ್ರಮುಖ ದೇವಸ್ಥಾನಗಳಲ್ಲೇ. ಹೆಚ್ಚಾಗಿ ಹನುಮಂತನ ಗುಡಿಯಲ್ಲಿ ಅಥವಾ ಸಮಾರಂಭದಲ್ಲಿ ಸಾರ್ವಜನಿಕವಾಗಿ ಜಾತಿ ಮತ ಪಂಥಗಳ ಬೇಧವಿಲ್ಲದೆ ಎಲ್ಲರೂ ಸೇರಿ ಒಬ್ಬ ಜ್ಯೋತಿಷಿಯಿಂದ ಪಂಚಾಂಗ ಪಠಣ ಮಾಡಿಸುತ್ತಾರೆ. ಇದು ಮಹಾಭಾರತ ಕಾಲದಿಂದಲೂ ನಡೆದುಕೊಂಡು ಬಂದಿದೆ. ಯುಗಾದಿ ಹಬ್ಬದಂದು 'ತಿಥಿಯ ಶ್ರವಣ ಮಾಡುವುದರಿಂದ ಸಂಪತ್ತು, ವಾರದಿಂದ ಆಯುಷ್ಯ ವೃದ್ಧಿ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗನಾಶ, ಕರಣದಿಂದ ಚಿಂತಿಸಿದ ಕಾರ್ಯದಲ್ಲಿ ಸಿದ್ಧಿ ಲಭಿಸುತ್ತವೆ' ಎಂಬ ನಂಬಿಕೆ ಇದೆ. ಒಂದು ವೇಳೆ ಊರಲ್ಲಿ ದೇಗುಲವಿಲ್ಲವೆಂದರೆ, ಊರಿನ ಪ್ರಮುಖರ ಮನೆ ಇದಕ್ಕೆ ವೇದಿಕೆಯಾಗುತ್ತದೆ. ಇದು, ಒಂದು ದೃಷ್ಟಿಯಿಂದ ಸಾಮಾಜಿಕ ಸಂಘಟನೆಗೆ ಸಹಾಯಕ. ಅಂದಹಾಗೆ, ಪಂಚಾಂಗ ಶ್ರವಣದ ಸಂಪ್ರದಾಯ ಹೆಚ್ಚಾಗಿ ಬಳಕೆಯಲ್ಲಿರುವುದು ಕರ್ನಾಟಕ, ಆಂಧ್ರ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ. ಪಂಚಾಂಗ ಶ್ರವಣದಲ್ಲಿ ರಾಶಿ ಭವಿಷ್ಯದಿಂದ ಹಿಡಿದು ಮಳೆ-ಬೆಳೆ, ಆಯ-ವ್ಯಯ, ದೇಶದ ಭವಿಷ್ಯ, ಯುದ್ಧ-ಶಾಂತಿ ಹೀಗೆ ಮನುಕುಲದ ಒಳಿತು ಅಡಗಿರುವ ವಿಚಾರಗಳನ್ನೇ ಕೇಳಲಾಗುವುದು. ಚಾಂದ್ರಮಾನ ಎಂದರೇನು? ಧಾರ್ಮಿಕ ಆಚರಣೆಗೆ ಸಂಪ್ರದಾಯದ ಆಧಾರವಿದ್ದರೂ ಖಗೋಳದ ಒಂದು ನಿರ್ದಿಷ್ಟ ಘಟನೆಗೆ ಅದು ಸಂವಾದಿಯಾದಾಗ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತದೆ. ಚಂದ್ರನ ಚಲನೆಯನ್ನು ಅನುಸರಿಸಿ, ಅಮಾವಾಸ್ಯೆ-ಹುಣ್ಣಿಮೆಗಳ ಆಧಾರದ ಮೇಲೆ, ಮಾಸ ಗಣನೆ ಮಾಡುವ ಪದ್ಧತಿಯೇ ಚಾಂದ್ರಮಾನ. 'ತಿಂಗಳು' ಎಂಬ ಹೆಸರು ಬಂದಿರುವುದು ಚಂದ್ರನಿಂದಲೇ. ಹೀಗಾಗಿಯೇ 'ತಿಂಗಳು ಮಾಮ, ತಿಂಗಳ ಬೆಳಕು' ಎಂಬಲ್ಲೆಲ್ಲ 'ತಿಂಗಳು' ಎಂದರೆ 'ಚಂದ್ರ' ಎಂದೇ ಅರ್ಥ. ಇಲ್ಲಿ ಹುಣ್ಣಿಮೆಯಂದು ಚಂದ್ರ ಯಾವ ನಕ್ಷತ್ರಯುಕ್ತನಾಗಿರುವನೋ ಆ ಹೆಸರಿನಿಂದಲೇ ಆಯಾ ತಿಂಗಳನ್ನು ಕರೆಯಲಾಗುತ್ತದೆ. ಉದಾಹರಣೆಗೆ, ಚಂದ್ರ ಅಂದು ಚಿತ್ತಾ ನಕ್ಷತ್ರಯುಕ್ತನಾಗಿದ್ದರೆ ಅದು ಚೈತ್ರ ಮಾಸ, ವಿಶಾಖ ನಕ್ಷತ್ರದಲ್ಲಿದ್ದರೆ ಅದು ವೈಶಾಖ ಮಾಸ. ಇಲ್ಲಿಯ ತಿಥಿಗಳು, ಮಾಸಗಳು ಎಲ್ಲವೂ ಖಗೋಳದಲ್ಲಿ ಸಂಭವಿಸುವ ಘಟನೆಗಳಿಗೆ ಸಂವಾದಿಯಾಗಿವೆ. 5ನೇ ಶತಮಾನದಲ್ಲಿದ್ದ ಪ್ರಸಿದ್ಧ ಖಗೋಳ ವಿಜ್ಞಾನಿ ವರಾಹಮಿಹಿರ ಕೂಡ ಚೈತ್ರ ಶುದ್ಧ ಪಾಡ್ಯವೇ ಹೊಸ ವರ್ಷವೆಂದು ದೃಢೀಕರಿಸಿದ್ದಾನೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ