Skip to main content

ಆಷಾಢ ಏಕಾದಶೀ – ಶಯನೀ ಏಕಾದಶೀ

ಭಾರತೀಯ ಸನಾತನ ಧರ್ಮದಲ್ಲಿ ಏಕಾದಶೀ ಮತ್ತು ಉಪವಾಸ ಇವು ಪರ್ಯಾಯ ವಾಚಕಗಳಾಗಿವೆ. ನಮ್ಮ ಧರ್ಮಶಾಸ್ತ್ರಗಳಲ್ಲಿ ಅನೇಕ ರೀತಿಯ ಉಪವಾಸ ವ್ರತಗಳಿದ್ದು ಎಲ್ಲವುಗಳಿಗೂ ತನ್ನದೇ ಆದ ಮಹತ್ವವಿದೆ ಮತ್ತು ಅವುಗಳನ್ನು ನಿಷ್ಠೆಯಿಂದ ಪಾಲಿಸುವ ಶ್ರದ್ಧೇಯ ಬಳಗವಿದೆ. ಆದರೆ ಏಕಾದಶಿಯ ಉಪವಾಸಕ್ಕಿರುವ ಮಹತ್ವ ಮತ್ತು ಪ್ರಧಾನತೆ ಬೇರೆ ಇನ್ಯಾವುದೇ ವ್ರತಕ್ಕಾಗಲೀ ಉಪವಾಸಕ್ಕಾಗಲೀ ಇಲ್ಲ. ಹಾಗೆಯೇ ಏಕಾದಶಿಯ ಪ್ರಾಚೀನತೆಯು ಸಹ ಇನ್ನಾವುದೇ ಉಪವಾಸ ವ್ರತಕ್ಕಿಲ್ಲ. ವೈದಿಕ ಸಾಹಿತ್ಯ, ಇತಿಹಾಸ, ಪುರಾಣ, ತಂತ್ರಾಗಮ, ಧರ್ಮಶಾಸ್ತ್ರ, ಸ್ಮೃತಿಗಳು, ನಿಬಂಧ ಗ್ರಂಥಗಳು, ಶಾಸ್ತ್ರ ಕಾವ್ಯಗಳು, ಜ್ಯೋತಿಷ್ಯ – ಹೀಗೆ ಏಕಾದಶಿಯ ಕುರಿತು ನಿರ್ಣಯಮಾಡದ ಗ್ರಂಥಗಳೇ ಇಲ್ಲ. ಈ ವ್ರತವು ಭಾರತದಾದ್ಯಂತ (ಇಂದು ಜಗದಾದ್ಯಂತವೂ ಸಹ!) ಎಲ್ಲ ವೈಷ್ಣವ-ಭಾಗವತ ಸಂಪ್ರದಾಯದ ಅನುಯಾಯಿಗಳಿಗೆ ನಿತ್ಯವ್ರತವಾಗಿದೆ. ಜನ್ಮಾಂತರದ ಪಾಪಗಳನ್ನು ಕಳೆಯುವುದರಲ್ಲಿ, ಶ್ರೀಹರಿಯ ಕೃಪೆಯನ್ನು ತಂದು ಕೊಡುವುದರಲ್ಲಿ ಏಕಾದಶಿಗೆ ಸಮನಾದ ವ್ರತವು ಇನ್ನೊಂದಿಲ್ಲ. ಅಂತಃಕರಣ ಶುದ್ಧಿ, ಬಹಿರಂಗ ಶುದ್ಧಿ, ಆರೋಗ್ಯ ಭಾಗ್ಯ, ಸಕಲ ದೋಷಗಳ ಪರಿಹಾರ ಈ ವ್ರತಾಚರಣೆಯ ಫಲಪ್ರಸಾದವಾಗಿದೆ. ಏಕಾದಶೀ ಉಪವಾಸದ ಹಿರಿಮೆ ಏಕಾದಶೀಸಮುತ್ಥೇನ ವಹ್ನಿನಾ ಪಾತಕೇಂಧನಮ್ | ಭಸ್ಮೀಭವತಿ ರಾಜೇಂದ್ರ ಅಪಿ ಜನ್ಮಶತೋದ್ಭವಮ್ || (ಪದ್ಮಪುರಾಣ ಉತ್ತರಖಂಡ ೨೬೨-೧೦) ಏಕಾದಶೀ ಎಂಬ ವ್ರತಾಗ್ನಿಯಿಂದ ಹುಟ್ಟುವ ಅಗ್ನಿಯು ನೂರಾರು ಜನ್ಮಗಳಿಂದ ಸಂಚಿತವಾದ ಪಾತಕಗಳೆಂಬ ಇಂಧನವನ್ನು ಸಂಪೂರ್ಣವಾಗಿ ಸುಟ್ಟು ಭಸ್ಮಮಾಡುತ್ತದೆ. ಗ್ರಹಣ, ವ್ಯತಿಪಾತಾದಿ ಮುಹೂರ್ತಗಳಲ್ಲಿ ಮಾಡಿದ ಜಪ-ದಾನ-ಹೋಮ ಮೊದಲಾದ ದೈವಕಾರ್ಯಗಳು ಶ್ರೇಷ್ಟ ಫಲವನ್ನು ಕೊಡುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ, ಆದರೆ ಏಕಾದಶೀ ಉಪವಾಸವು ಈ ಎಲ್ಲ ಸಿದ್ಧದಿನಗಳಿಗಿಂತಲೂ ಶ್ರೇಷ್ಟವಾದದ್ದಾಗಿದೆ – ಉಪರಾಗಸಹಸ್ರಾಣಿ ವ್ಯತೀಪಾತಾಯುತಾನಿ ಚ | ಅಮಾಲಕ್ಷಂ ತು ದ್ವಾದಶ್ಯಾಃ ಕಲಾಂ ನಾರ್ಹಂತಿ ಷೋಡಶೀಮ್ || (ವಾಯು ಪುರಾಣ ಮಾಘಮಾಹಾತ್ಮ್ಯ) ಸಾವಿರಾರು ಗ್ರಹಣಗಳಾಗಲಿ, ಹತ್ತು ಸಾವಿರ ವ್ಯತೀಪಾತಗಳಾಗಲಿ, ಲಕ್ಷ ಅಮಾವಾಸ್ಯೆಗಳಾಗಲಿ ಏಕಾದಶೀ ವ್ರತದ ಹದಿನಾರನೇಯ ಒಂದಂಶಕ್ಕೂ ಸಮನಾಗಲಾರವು. ಎಲ್ಲ ಯಜ್ಞ ಯಾಗಗಳಿಗಿಂತಲೂ ಏಕಾದಶೀಯ ಮಹಿಮೆ ಹಿರಿದಾಗಿದೆ – ಅಶ್ವಮೇಧಸಹಸ್ರಾಣಿ ವಾಜಪೇಯಶತಾನಿ ಚ | ಏಕಾದಶ್ಯುಪವಾಸಸ್ಯ ಕಲಾಂ ನಾರ್ಹಂತಿ ಷೋಡಶೀಮ್ || (ಪದ್ಮ ಪುರಾಣ ಉತ್ತರಖಂಡ ೨೩೪-೦೭) ಸಾವಿರಾರು ಅಶ್ವಮೇಧ, ಹತ್ತು ಸಾವಿರ ವಾಜಪೇಯಿ ಯಜ್ಞಗಳಾಗಲಿ ಏಕಾದಶೀ ಉಪವಾಸದ ಹದಿನಾರನೇಯ ಒಂದಂಶದಷ್ಟೂ ಸಮ ಆಗಲಾರವು. ಏಕಾದಶೀಯಂದು ಆಹಾರ ನಿಷೇಧ ಏಕಾದಶೀಯಂದು ಆಹಾರ ನಿಷೇಧಕ್ಕೆ ಕಾರಣ ಏನು? ಬೃಹನ್ನಾರದೀಯ ಪುರಾಣ ಈ ಕುರಿತು ಹೀಗೆ ಹೇಳಿದೆ – ಪೃಥಿವ್ಯಾಂ ಯಾನಿ ಪಾಪಾನಿ ಬ್ರಹ್ಮಹತ್ಯಾದಿಕಾನಿ ಚ | ಅನ್ನಮಾಶ್ರಿತ್ಯ ತಿಷ್ಠಂತಿ ಸಂಪ್ರಾಪ್ತೇ ಹರಿವಾಸರೇ || ಬ್ರಹ್ಮಹತ್ಯಾ ಮೊದಲಾದ ಯಾವ ಯಾವ ಮಹಾಪಾಪಗಳು ಈ ಭೂಮಿಯಲ್ಲಿ ಇವೆಯೋ ಅವೆಲ್ಲವು ಏಕಾದಶಿ ತಿಥಿಯಂದು ಅನ್ನವನ್ನು ಆಶ್ರಯಿಸಿಕೊಂಡಿರುತ್ತವೆ. ಆದ್ದರಿಂದ ಏಕಾದಶಿಯಲ್ಲಿ ಆಹಾರ ಸ್ವೀಕಾರ ಮಹಾಪಾಪಕಾರಕ, ನರಕಕ್ಕೆ ಗತಿಯೆಂದು ಅನೇಕ ಪ್ರಮಾಣಗಳು ಸಾರಿರುತ್ತವೆ. ಕಾರಣ ಪ್ರತಿಯೊಬ್ಬರೂ ಏಕಾದಶೀ ಉಪವಾಸವನ್ನು ಅವಶ್ಯವಾಗಿ ಮಾಡಬೇಕು ಎಂದು ಧರ್ಮಶಾಸ್ತ್ರಗಳ ಆದೇಶ. ಹರಿದಿನದಲಿ ಉಂಡ ನರರಿಗೆ ಘೋರ ನರಕ ತಪ್ಪದು ಎಂದು ಶ್ರುತಿಯು ಸಾರುತಲಿದೆ || ಎಂಬ ಪುರಂದರದಾಸರ ಒಂದು ಕೀರ್ತನೆ ಏಕಾದಶಿಯ ಮಹತ್ವವನ್ನು ಸುಂದರವಾಗಿ ವರ್ಣಿಸುತ್ತದೆ. ಏಕಾದಶೀ ಉಪವಾಸದಿಂದ ಸರ್ವಬಾಧಾ ನಿವಾರಣೆ ಎಲ್ಲ ವಿಧವಾದ ಗ್ರಹಬಾಧೆ, ನವಗ್ರಹ ದೋಷ, ಸಾಡೇಸಾತೀ ಮುಂತಾದವುಗಳ ಶಮನಕ್ಕಾಗಿಯೂ ಏಕಾದಶೀ ವೃತ ಶೀಘ್ರ ಫಲಪ್ರದ. ತಪ್ಪದೇ ಏಕಾದಶೀ ಆಚರಣೆಯಿಂದ ಗ್ರಹದೋಷ ನಿವಾರಣೆಯಾಗಿರುವುದು ಪ್ರತ್ಯಕ್ಷ ಅನುಭವಕ್ಕೆ ಬಂದಿರುವ ಸಂಗತಿ. ಈ ಕುರಿತು ಪದ್ಮ ಪುರಾಣ ವಚನ ಹೀಗೆ ಇದೆ – ಏಕಾದಶೀಸಮಂ ಕಿಂಚಿತ್ ಪಾಪತ್ರಾಣಂ ನ ವಿದ್ಯತೇ | ವ್ಯಾಜೇನಾಪಿ ಕೃತಾ ರಾಜನ್ ನ ದರ್ಶಯತಿ ಭಾಸ್ಕರಿಮ್ || ಏಕಾದಶಿಗೆ ಸಮನಾದ, ಪಾಪಗಳಿಂದ ರಕ್ಷಿಸುವ ವೃತ ಬೇರೊಂದಿಲ್ಲ. ಯಾವುದೇ ನೆಪದಿಂದಾದರೂ ಸರಿ ಈ ವೃತವನ್ನಾಚರಿಸಿದವನಿಗೆ, ಭಾಸ್ಕರನ ಮಗನಾದ ಯಮ (ಮತ್ತು ಶನೈಶ್ಚರ) ದರ್ಶನವಿಲ್ಲ ಅರ್ಥಾತ್ ಅವರಿಂದ ಯಾವುದೇ ಭಯವಿಲ್ಲ. ಪ್ರತಿ ಮಾಸಕ್ಕೆ ಶುಕ್ಲ ಪಕ್ಷ, ಕೃಷ್ಣ ಪಕ್ಷಗಳಲ್ಲಿ ಎರಡು ಏಕಾದಶಿಗಳು ಬರುತ್ತವೆ. ವರ್ಷದಲ್ಲಿ ಒಟ್ಟು 24. ಅಧಿಕಮಾಸ ಬಂದಾಗ ಇನ್ನೆರಡು ಅಧಿಕ ಏಕಾದಶೀಗಳು. ವರ್ಷದಲ್ಲಿ 24 ಉಪವಾಸಗಳನ್ನು ಸುಲಭ. ಯಾವುದೇ ದೇಶ, ಪರಿಸ್ಥಿತಿಯ ನಿರ್ಬಂಧ ಈ ಉಪವಾಸ ವೃತಕ್ಕೆ ಇಲ್ಲ. ವರ್ಷದ ಎಲ್ಲ ಏಕಾದಶಿಗಳಲ್ಲಿ ಎರಡು ಏಕಾದಶಿಗಳಿಗೆ ವಿಶೇಷವಾದ ಮಹತ್ವವಿದೆ. ಆಷಾಢ ಶುದ್ಧೈಕಾದಶೀ ಮತ್ತು ಕಾರ್ತಿಕ ಶುದ್ಧೈಕಾದಶೀಗಳೇ ಈ ಎರಡು ಏಕಾದಶಿಗಳು. ಆಷಾಢಮಾಸದ ಈ ಏಕಾದಶಿಯ ದಿವಸದಿಂದ ಕಾರ್ತಿಕ ಶುಕ್ಲ ಏಕಾದಶೀಯ ವರೆಗಿನ ಅತ್ಯಂತ ಪುಣ್ಯಪ್ರದವಾದ ನಾಲ್ಕು ತಿಂಗಳ ಕಾಲವನ್ನು ಚಾತುರ್ಮಾಸವೆಂದು ಕರೆಯಲಾಗುತ್ತದೆ. ಪರಮಾತ್ಮನಾದ ಶ್ರೀಮಹಾವಿಷ್ಣುವು ಕ್ಷೀರಸಾಗರದಲ್ಲಿ ಆಷಾಢ ಶುಕ್ಲ ಏಕಾದಶಿಯಂದು ಶಯನವನ್ನು ಮಾಡುತ್ತಾನೆ. ಆದ್ದರಿಂದ ಈ ಏಕಾದಶಿಗೆ ಶಯನೈಕಾದಶೀ, ವಿಷ್ಣುಶಯನೈಕಾದಶೀ, ದೇವಶಯನೈಕಾದಶೀ ಎಂದು ಕರೆಯಲಾಗಿದೆ. ಈ ರೀತಿ ಕೇವಲ ಲೀಲಾಮಾತ್ರಕ್ಕಾಗಿ ಯೋಗನಿದ್ರೆಯಲ್ಲಿ ಪವಡಿಸಿದ ಶ್ರೀಮನ್ನಾರಾಯಣನು ಕಾರ್ತಿಕ ಶಕ್ಲೈಕಾದಶಿಯಂದು ಜಾಗ್ರತನಾಗುತ್ತಾನೆ, ಆ ದಿನ ಪ್ರಬೋಧಿನೀ ಏಕಾದಶೀ ಎಂದು ಕರೆಯಿಸಿಕೊಳ್ಳುತ್ತದೆ. ಚಾತುರ್ಮಾಸದ ಪ್ರಾರಂಭದಲ್ಲಿ ಬರುವ ಶಯನೈಕಾದಶಿಯನ್ನು ಪದ್ಮಾ ಏಕಾದಶೀ ಎಂದು ಸಹ ಕರೆಯಲಾಗಿದೆ. ಈ ಶ್ರೇಷ್ಟವಾದ ಏಕಾದಶಿಯಂದು ಉಪವಾಸವನ್ನು ಮಾಡಿ ವಿಷ್ಣುಮಂದಿರಗಳ ದರ್ಶನ ಮಾಡುವುದರಿಂದ ಮಹಾಪಾಪಗಳ ನಾಶ, ಇಹ ಮತ್ತು ಪರದಲ್ಲಿ ಉತ್ಕರ್ಷ ಖಂಡಿತ ಎನ್ನುವುದು ಶಾಸ್ತ್ರಗಳ ಆಣೆಯಾಗಿದೆ. ಆಷಾಢ ಶುಕ್ಲ ಶಯನೀ ಏಕಾದಶೀ ಮಹಾತ್ಮೆ ಶಯನೀ ಏಕಾದಶಿಯ ಮಹಾತ್ಮೆಯು ವಿಸ್ತಾರವಾಗಿ ಭವಿಷ್ಯೋತ್ತರಪುರಾಣದಲ್ಲಿ ಶ್ರೀಕೃಷ್ಣ ಯುಧಿಷ್ಠಿರ ಸಂವಾದವಾಗಿ ಬರುತ್ತದೆ. ಅಲ್ಲಿ ಮೊದಲು ಏಕಾದಶಿಯ ಮಹಿಮೆಯನ್ನು ಹೇಳಿ ಚಾತುರ್ಮಾಸ ವ್ರತ ನಿಯಮಾದಿಗಳ ವರ್ಣನೆ ದೀರ್ಘವಾಗಿ ಹೇಳಲಾಗಿದೆ. ಈ ಏಕಾದಶೀ ತಿಥಿಯಿಂದಲೇ ಚಾತುರ್ಮಾಸ ವ್ರತವು ಸಹ ಪ್ರಾರಂಭವಾಗುತ್ತದೆ. ಈ ದಿನದಂದು ಶ್ರೀಮನ್ನಾರಾಯಣನು ಕ್ಷೀರಸಾಗರದಲ್ಲಿ ನಿದ್ರೆಯನ್ನು ಹೊಂದುವುದರಿಂದ ಈ ಏಕಾದಶಿಯನ್ನು ಶಯನೀ ಏಕಾದಶೀ ಎಂತಲೂ ಕರೆಯಲಾಗುತ್ತದೆ. ಉಪವಾಸ, ಪಾರಾಯಣ, ಭಜನೆ, ಜಾಗರಣೆ ಮತ್ತು ವಿಷ್ಣುಮಂದಿರಗಳ ದರ್ಶನ ಈ ದಿನದ ಮಹಾಪುಣ್ಯ ವಿಶೇಷ. ಪಂಢರಾಪುರದಲ್ಲಿ ಈ ತಿಥಿಯಂದು ಶ್ರೀವಿಠ್ಠಲನ ದರ್ಶನಕ್ಕಾಗಿ ಲಕ್ಷಾನುಲಕ್ಷ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಈ ಲೇಖನದಲ್ಲಿ ಕೇವಲ ಏಕಾದಶೀ ಕುರಿತ ಮಹಾತ್ಮೆಯನ್ನು ಸಂಕ್ಷಿಪ್ತವಾಗಿ ಸಂಗ್ರಹಮಾಡಿದ್ದೇನೆ. ಒಮ್ಮೆ ನಾರದರು ತನ್ನ ತಂದೆಯಾದ ಚತುರ್ಮುಖ ಬ್ರಹ್ಮದೇವರ ಕುರಿತು ಆಷಾಢಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯ ಮಹಿಮೆಯನ್ನು ಹೇಳಬೇಕಾಗಿ ಬೇಡಿಕೊಂಡರು. ಆಗ ಬ್ರಹ್ಮದೇವರು ನಾರದರನ್ನು ಕುರಿತು – ಹೇ ವಿಷ್ಣುಭಕ್ತರಲ್ಲಿ ಶ್ರೇಷ್ಠನದ ನಾರದನೇ – ನಾತಃ ಪರತರಂ ಲೋಕೇ ಪವಿತ್ರಂ ಹರಿವಾಸರಾತ್ | ಕರ್ತವ್ಯಂ ತು ಪ್ರಯತ್ನೇನ ಸರ್ವಪಾಪಾಪನುತ್ತಯೇ || ಈ ಲೋಕದಲ್ಲಿ ಏಕಾದಶೀ ವ್ರತಕ್ಕಿಂತ ಶ್ರೇಷ್ಠವಾದ ಬೇರೊಂದು ಪವಿತ್ರವಾದ ವ್ರತವಿಲ್ಲ, ಆದುದರಿಂದ ಸರ್ವಪಾಪಗಳ ನಿವೃತ್ತಿಗಾಗಿ ಪ್ರಯತ್ನಪೂರ್ವಕ ಏಕಾದಶೀ ವ್ರತವನ್ನು ಆಚರಿಸಬೇಕು. ಏಕಾದಶ್ಯಾಂ ವ್ರತಂ ಪುಣ್ಯಂ ಪಾಪಘ್ನಂ ಸರ್ವಕಾಮದಮ್ | ನ ಕೃತಂ ಯೈರ್ನರೈರ್ಲೋಕೇ ತೇ ನರಾ ನಿರಯೈಷಿಣಃ || ಪಾಪಗಳನ್ನು ನಾಶಮಾಡುವಂತಹ, ಸಕಲ ಕಾಮನೆಗಳನ್ನು ತಂದುಕೊಡುವಂತಹ ಏಕಾದಶೀ ಎಂಬ ಪುಣ್ಯವ್ರತವನ್ನು ಈ ಲೋಕದಲ್ಲಿ ಯರು ಆಚರಿಸುವುದಿಲ್ಲವೋ ಅವರು ನರಕವನ್ನು ಸೇರುತ್ತಾರೆ. ಹೀಗೆ ಏಕಾದಶೀ ಉಪವಾಸದ ಮಹತ್ವವನ್ನು ವರ್ಣಿಸಿ, ಪದ್ಮಾ ಎಂಬ ಹೆಸರುಳ್ಳ ಶ್ರೀಹರಿಯ ಅತ್ಯಂತ ಪ್ರೀತಿಗೆ ಪಾತ್ರವಾದಂಥ ಈ ಏಕಾದಶಿಯ ಕುರಿತ ಪೌರಾಣಿಕವಾದ ಐತಿಹ್ಯವನ್ನು ಬ್ರಹ್ಮದೇವರು ಹೇಳಿದರು. ಈ ಪುರಾಣ ಕಥಾಶ್ರವಣಮಾತ್ರದಿಂದ ಮಹಾಪಾಪಗಳು ನಾಶವಾಗಿ ಸದ್ಗತಿ ದೊರಕುತ್ತದೆ. ಹಿಂದೆ ಕೃತಯುಗದಲ್ಲಿ ವೈವಸ್ವತಮನುವಿನ ವಂಶದಲ್ಲಿ ಮಹಾದರ್ಮಿಷ್ಠನಾದ ಮಾಂಧಾತಾ ಎಂಬ ರಾಜನು ಚಕ್ರವರ್ತಿಯಾಗಿ ಭೂಮಿಯನ್ನು ಆಳುತ್ತಿದ್ದನು. ಮಹಾ ಪರಾಕ್ರಮಿಯು, ಸತ್ಯನಿಷ್ಠನು ಆದ ಆ ರಾಜರ್ಷಿಯು ತನ್ನ ಪ್ರಜೆಗಳನ್ನು ಮಕ್ಕಳ ಹಾಗೆ ಪಾಲಿಸುತ್ತಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ನಿರಾತಂಕರಾಗಿ, ಧರ್ಮದಿಂದ ಸಮೃದ್ಧ ಜೀವನ ನಡೆಸುವವರಾಗಿದ್ದರು. ದುರ್ಭಿಕ್ಷೆಯಾಗಲಿ ಆಧಿವ್ಯಾಧಿಗಳ್ಯಾವವೂ ಅವನ ರಾಜ್ಯದಲ್ಲಿ ಇರಲಿಲ್ಲ. ಒಮ್ಮೆ ಮಾಂಧಾತಾ ರಾಜನ ರಾಜ್ಯದಲ್ಲಿ ವಿಧಿವಶಾತ್ ಎಂಬಂತೆ ಭಯಂಕರವಾದ ಮೂರುವರ್ಷಗಳಷ್ಟು ದೀರ್ಘಕಾಲವಾದ ಬರಗಾಲ ಬಿದ್ದಿತು. ಮಳೆ-ಬೆಳೆಗಳಿಲ್ಲದೆ ಪ್ರಜೆಗಳಲ್ಲಿ ಹಾಹಾಕಾರ ಉಂಟಾಯಿತು. ಹಸಿವೆ ನೀರಡಿಕೆಯಿಂದ ಪೀಡಿತರಾಗಿ ಜನ ರಾಜನ ಮೊರೆ ಹೊಕ್ಕರು. ಹೇ ರಾಜನೇ – ಪರ್ಜನ್ಯರೂಪಿಯಾದ ಭಗವಾನ್ ವಿಷ್ಣುವು ಸದಾ ಸರ್ವತ್ರ ವ್ಯಾಪ್ತನಾಗಿರುವನು, ಅವನೇ ಮಳೆಯನ್ನು, ಮಳೆಯಿಂದ ಧಾನ್ಯಗಳನ್ನು ಮತ್ತು ಧಾನ್ಯಗಳಿಂದ ಪ್ರಜೆಗಳನ್ನು ಸೃಷ್ಟಿಮಾಡುವನು. ಮಳೆಯ ಅಭಾವದಿಂದ ಪ್ರಜೆಗಳ ನಾಶವಾಗುತ್ತಿರುವ ಕಾರಣ, ನೀನು ಏನಾದರೂ ಉಪಾಯವನ್ನು ಮಾಡು – ಎಂದು ಪ್ರಾರ್ಥಿಸಿಕೊಂಡರು. ಪ್ರಜಾಜನ ಪಾಲಕನಾದ ರಾಜನು ಈ ಕ್ಷೋಭೆಯಿಂದ ಪರಿಹಾರದ ಶೋಧನೆಗಾಗಿ ಋಷಿಮುನಿಗಳ ಆಶ್ರಮಗಳನ್ನು ಅರಸುತ್ತ ಅರಣ್ಯಕ್ಕೆ ತೆರಳಿದನು. ಒಂದು ಪ್ರದೇಶದಲ್ಲಿ ಅತ್ಯಂತ ತೇಜೋರಾಶಿಯಂತಿರುವ ಪ್ರತಿಬ್ರಹ್ಮನ ಹಾಗೆ ಹೊಳೆಯುತ್ತಿರುವ ಬ್ರಹ್ಮದೇವರ ಮಗನಾದ ಅಂಗೀರಸ ಮುನಿಗಳನ್ನು ನೋಡಿದನು. ಅವರಿಂದ ಅನುಗ್ರಹ ಪಡೆಯಬೇಕೆಂದು ಇಚ್ಛಿಸಿ ಬಳಿಸಾರಿ ವಿನಯಪೂರ್ವಕವಾಗಿ ನಮಸ್ಕರಿಸಿ ನಿಂತುಕೊಂಡನು. ಚಕ್ರವರ್ತಿಯು ತನ್ನ ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪದ ವಿಷಯವನ್ನು ಅಂಗೀರಸರಿಗೆ ತಿಳಿಸಿ ಸಮಾಧಾನವನ್ನು ಹೇಳಬೇಕೆಂದು ಕೇಳಿಕೊಂಡನು. ಋಷಿಗಳು, ಮಾಂಧಾತಾ ರಾಜನೇ – ಈ ಕೃತಯುಗವು ಯುಗಗಳಲ್ಲಿ ಶ್ರೇಷ್ಠವಾಗಿದೆ, ಈ ಯುಗದಲ್ಲಿ ಎಲ್ಲರೂ ಬ್ರಹ್ಮನನ್ನು ಕುರಿತು ಉಪಾಸನೆಯನ್ನು ಮಾಡುವುದರಿಂದ ಧರ್ಮವು ನಾಲ್ಕೂ ಚರಣಗಳಿಂದ ಯುಕ್ತವಾಗಿದೆ. ಬ್ರಾಹ್ಮಣರು ಮಾತ್ರ ತಪವನ್ನಾಚರಿಸುವುದು ಈ ಯುಗಧರ್ಮ, ಆದರೆ ಇದಕ್ಕೆ ವಿರುದ್ಧವಾಗಿ ನಿನ್ನ ರಾಜ್ಯದಲ್ಲಿ ವಿಧರ್ಮಿಯಾದ ವೃಷಲನೆಂಬ ಅಂತ್ಯಜನು ತಪಸ್ಸನ್ನಾಚರಿಸುತ್ತಿರುವುದು ಈ ಕ್ಷಾಮಕ್ಕೆ ಕಾರಣವಾಗಿದೆ. ಅವನ ನಿವಾರಣೆಯಾದರೆ ಕ್ಷಾಮ ಕಳೆದು ಪುನಃ ಸುಭೀಕ್ಷವುಂಟಾಗುತ್ತದೆ ಎಂದು ಹೇಳಿದರು. ರಾಜನು, ನಿರಪರಾಧಿಯಾದ ಮತ್ತು ತಪಸ್ಸನ್ನಾಚರಿಸುತ್ತಿರುವ ಅವನನ್ನು ತಾನು ನಿವಾರಿಸಲಾರೆ, ಆದ್ದರಿಂದ ಇನ್ನೇನಾದರೂ ಪರ್ಯಾಯ ಧರ್ಮೋಪಾಯವನ್ನು ತಿಳಿಸಬೇಕೆಂದು ಬೇಡಿಕೊಂಡನು. ರಾಜನ ಕ್ಷಮಾಗುಣ ಮತ್ತು ಧರ್ಮಬುದ್ಧಿಯಿಂದ ಅಂಗೀರಸರು ಪ್ರಸನ್ನರಾಗಿ, ಹೇ ರಾಜನೇ ಆಷಾಢ ಮಾಸದ ಶುಕ್ಲಪಕ್ಷದಲ್ಲಿ ಬರುವ ಪದ್ಮಾನಾಮಕ ಏಕಾದಶಿಯ ವ್ರತವನ್ನು ನೀನು ಪರಿವಾರ ಪ್ರಜಾಸಹಿತ ಮಾಡುವೀಯಾದರೆ ಕ್ಷಾಮವು ನೀಗಿ ನಿನ್ನ ರಾಜ್ಯದಲ್ಲಿ ಮೊದಲಿನಂತೆ ಸುಭೀಕ್ಷ ಉಂಟಾಗುತ್ತದೆ, ಹೇಗೆಂದರೆ ಈ ಏಕಾದಶಿಯು – ಸರ್ವಸಿದ್ಧಿಪ್ರದಾ ಹ್ಯೇಷಾ ಸರ್ವೋಪದ್ರವನಾಶಿನೀ | ಸರ್ವಸಿದ್ಧಿಯನ್ನು ಕೊಡುವುದು ಮತ್ತು ಎಲ್ಲ ಉಪದ್ರವಗಳನ್ನು ನಾಶಮಾಡುವಂತಹದ್ದಾಗಿದೆ, ಆದ್ದರಿಂದ ನೀನು ಈ ವ್ರತವನ್ನು ಖಂಡಿತವಾಗಿ ಮಾಡು ಎಂದು ಉಪದೇಶವನ್ನು ಕೊಟ್ಟರು. ಈ ಪ್ರಕಾರ ಅಂಗೀರಸರಿಂದ ಉಪದೇಶ ಪಡೆದವನಾಗಿ ರಾಜನು ತನ್ನ ರಾಜ್ಯಕ್ಕೆ ತೆರಳಿ, ಆಷಾಢ ಪ್ರಾಪ್ತವಾಗಲು ಸಮಸ್ತ ಪ್ರಜಾಜನ ಮತ್ತು ಪರಿವಾರ ಸಮೇತ ಈ ಏಕಾದಶೀ ವ್ರತವನ್ನು ಮಾಡಿದನು. ಶೀಘ್ರವಾಗಿ ವ್ರತಪ್ರಭಾವದಿಂದ ರಾಜ್ಯದಲ್ಲಿ ಸುವೃಷ್ಟಿಯಾಯಿತು ಮತ್ತು ಅವನ ರಾಜ್ಯ ಪುನಃ ಸಂಪದ್ಭರಿತವಾಯಿತು. ಏತಸ್ಮಾತ್ಕಾರಣಾದೇವ ಕರ್ತವ್ಯಂ ವ್ರತಮುತ್ತಮಮ್ | ಭುಕ್ತಿಮುಕ್ತಿಪ್ರದಂ ಚೈವ ಲೋಕಾನಾಂ ಸುಖದಾಯಕಮ್ || ಈ ಕಾರಣದಿಂದಲೇ ಶ್ರೇಷ್ಠವಾದ ಈ ಪದ್ಮಾವ್ರತವನ್ನು ಆಚರಿಸಬೇಕು. ಈ ವ್ರತವು ಭುಕ್ತಿ ಮುಕ್ತಿ ಪ್ರದವೂ, ಜನರಿಗೆ ಸುಖದಾಯಕವೂ ಆಗಿದೆ. ಈ ವ್ರತದ ಮಹಾತ್ಮೆಯ ಪಠನ ಹಾಗೂ ಶ್ರವಣಗಳಿಂದ ಸರ್ವಪಾಪಗಳೂ ನಾಶವಾಗುತ್ತವೆ. ಇತಿ ಆಷಾಢ ಏಕಾದಶೀ ವ್ರತ ಮಾಹಾತ್ಮ್ಯಮ್.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ